ಬೆಂಗಳೂರು: ಪುಸ್ತಕಗಳು ಆಯಾ ದೇಶದ ಶ್ರೀಮಂತಿಕೆಯ ಸಂಕೇತ. ಪುಸ್ತಕಗಳಿಲ್ಲದ ಸಮಾಜ ಅಪಾಯಕಾರಿ. ಅದು ಸಾಂಸ್ಕೃತಿಕ ದಾರಿದ್ರ್ಯ ಸೂಚಕ ಎಂದು ಸಾಹಿತಿ ನಾಗತಿಹಳ್ಳಿ ಚಂದ್ರಶೇಖರ್ ಅಭಿಪ್ರಾಯಪಟ್ಟಿದ್ದಾರೆ.
ಕೆಂಪೇಗೌಡ ರಸ್ತೆಯಲ್ಲಿ ಭಾನುವಾರ ನವಕರ್ನಾಟಕ ಪ್ರಕಾಶನದ 7ನೇ ಮಳಿಗೆ ಉದ್ಘಾಟನೆ ಹಾಗೂ 12 ಕೃತಿಗಳ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದರು.
ಜಗತ್ತಿನ ಯಾವುದೇ ನಗರಕ್ಕೆ ಹೋದರೂ ಚಿನ್ನಾಭರಣ, ಬಟ್ಟೆ, ಸೌಂದರ್ಯವರ್ಧಕ, ರಿಯಲ್ ಎಸ್ಟೇಟ್ ಇತ್ಯಾದಿ ಅಂಗಡಿಗಳು ಸಾಲುಸಾಲಾಗಿ ಸಿಗುತ್ತವೆ. ಆದರೆ, ಹುಡುಕಿದರೂ ಪುಸ್ತಕ ಮಳಿಗೆಗಳು ಸಿಗುವುದಿಲ್ಲ. ಇದು ಭಾರತಕ್ಕೂ ಅನ್ವಯ. ಅಷ್ಟರಮಟ್ಟಿಗೆ, ಸಾಹಿತ್ಯಿಕ ಜಗತ್ತು ಅವನತಿಯತ್ತ ಸಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕೆ.ಜಿ. ರಸ್ತೆ ಸಿನಿಮಾಕ್ಕೆ ಪ್ರಸಿದ್ಧಿ. ಪ್ರಸ್ತುತ, ಒಂದರ ಹಿಂದೆ ಒಂದರಂತೆ ಚಿತ್ರಮಂದಿರಗಳು ನೆಲಸಮಗೊಳ್ಳುತ್ತಿವೆ. ಇಂಥ ಸಂದರ್ಭದಲ್ಲಿ ಈ ರಸ್ತೆಯಲ್ಲಿ ಪುಸ್ತಕ ಮಳಿಗೆ ನೆಲೆಗೊಳ್ಳುತ್ತಿರುವುದು ಖುಷಿಯ ವಿಚಾರ. ನವಕರ್ನಾಟಕ ಪ್ರಕಾಶನ 1960ರಿಂದ ಇಲ್ಲಿವರೆಗೆ 6 ಮಳಿಗೆಗಳನ್ನು ಮಾತ್ರ ತೆರೆದಿದೆ. ಇದು ಕಡಿಮೆ ಎಂಬುದು ನನ್ನ ಭಾವನೆ. ಮುಂದೆ ಇನ್ನೂ ಹೆಚ್ಚಿನ ಮಳಿಗೆಗಳನ್ನು ತೆರೆಯಲಿ ಎಂದು ಆಶಿಸಿದರು.
ಮಳಿಗೆ ಉದ್ಘಾಟಿಸಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಲ್. ಹನುಮಂತಯ್ಯ ಮಾತನಾಡಿ, ಪುಸ್ತಕಗಳು ದೃಷ್ಟಿಕೋನ ಬದಲಾಯಿಸುತ್ತವೆ ಎಂದು ಹೇಳಿದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಮಾಲತಿ ಪಟ್ಟಣಶೆಟ್ಟಿ 12 ಕೃತಿಗಳನ್ನು ಲೋಕಾರ್ಪಣೆ ಮಾಡಿದರು. ಕೃತಿಗಳ ಲೇಖಕರಾದ ಡಾ. ಜಿ. ರಾಮಕೃಷ್ಣ, ಚಂದ್ರಕಾಂತ್ ಪೋಕಳೆ, ಡಾ. ಗೀತಾ ಶೆಣೈ, ಎಂ. ಅಬ್ದುಲ್ ರೆಹಮಾನ್ ಪಾಷಾ, ಸ. ರಘುನಾಥ್, ಎ.ಸಿ. ಡೋಂಗ್ರೆ, ಡಾ. ಶ್ರೀನಿವಾಸ ಕಕ್ಕಿಲ್ಲಾಯ ಹಾಗೂ ಪ್ರಕಾಶನದ ವ್ಯವಸ್ಥಾಪಕ ನಿರ್ದೇಶಕ ಆರ್.ಎಸ್. ರಘುರಾಮ್ ಉಪಸ್ಥಿತರಿದ್ದರು.