Tuesday, August 27, 2013

Navakarnataka Kitchen Garden - Prajavani 27 Aug 2013

http://prajavaniepaper.com/svww_zoomart.php?Artname=20130827f_004100004&ileft=7&itop=128&zoomRatio=130&AN=20130827f_004100004

 

 

 

 

 

 

 

 

 

 

 

 ಹೀಗೊಂದು ತರಕಾರಿ ಸೇವೆ

ಗಾಣಧಾಳು ಶ್ರೀಕಂಠ



`ಅಂಗಳದಲ್ಲಿ ತುಸು ಜಾಗವಿದ್ದರೆ ಕಟ್ಟಡ ನಿರ್ಮಿಸಿ, ಬಾಡಿಗೆ ದುಡಿಯುವ ಕಾಲದಲ್ಲಿ, ನವಕರ್ನಾಟಕ ಪಬ್ಲಿಕೇಷನ್ ಸಂಸ್ಥೆ ಮುಕ್ಕಾಲು ಎಕರೆಯಲ್ಲಿ ಸಾವಯವ ಕೈತೋಟ ನಿರ್ಮಿಸಿ, ತೋಟದ ತರಕಾರಿಗಳನ್ನು ಮಾರದೇ, ಕಚೇರಿಯ ಸಿಬ್ಬಂದಿಗೆ ಪೂರೈಸಿ ಹೊಸ ಪದ್ಧತಿಯೊಂದಕ್ಕೆ ನಾಂದಿ ಹಾಡಿದೆ. ಆಗಸ್ಟ್ 25ರ `ವಿಶ್ವ ಕೈತೋಟದ ದಿನ'ದ ಅಂಗವಾಗಿ ಸಂಸ್ಥೆಯ ಕೈತೋಟ ಕೈಂಕರ್ಯದ ಕಿರುಪರಿಚಯ
`ಸಂಸ್ಥೆಯೊಂದರಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಭವಿಷ್ಯನಿಧಿ, ಬೋನಸ್, ಹಬ್ಬ, ರಜೆ... ಹೀಗೆ ವಿವಿಧ ಸೌಲಭ್ಯಗಳನ್ನು ನೀಡುವುದು ವಾಡಿಕೆ. ಆದರೆ ಸಿಬ್ಬಂದಿಗೆ ಸಾವಯವ ತರಕಾರಿಯನ್ನು ಉಚಿತವಾಗಿ ಕೊಡುವುದನ್ನು ಎಲ್ಲಾದರೂ ಕೇಳಿದ್ದೀರಾ? ನೋಡಿದ್ದೀರಾ?
ನಿಜ, ಬೆಂಗಳೂರಿನ ಪ್ರತಿಷ್ಠಿತ ಪುಸ್ತಕ ಪ್ರಕಟಣಾ ಸಂಸ್ಥೆ ನವಕರ್ನಾಟಕ ಪಬ್ಲಿಕೇಷನ್, ತಮ್ಮ ಸಿಬ್ಬಂದಿಗೆ ಉಚಿತವಾಗಿ ತರಕಾರಿ ಪೂರೈಸುತ್ತದೆ. ಅದು ನಿಯಮಿತ, ನಿರಂತರವಲ್ಲದಿದ್ದರೂ, ಅವಕಾಶ ದೊರೆತಾಗ ಹಾಗೂ ತಾವೇ ಬೆಳೆಸಿದ ಕೈತೋಟದಲ್ಲಿ ತರಕಾರಿ ಲಭ್ಯವಾದಾಗ, ತನ್ನ ಸಿಬ್ಬಂದಿಗೂ, ತರಕಾರಿ, ಹೂವು, ಹಣ್ಣು ಎಲ್ಲವನ್ನೂ ಸಮನಾಗಿ ಹಂಚುತ್ತದೆ. ಇದು ಒಂದೂವರೆ ದಶಕಗಳಿಂದ ನಡೆದುಕೊಂಡು ಬಂದಿರುವ `ಅಘೋಷಿತ' ಪದ್ಧತಿ !
`ಪುಸ್ತಕಗಳ ಮೂಲಕ ಮನುಕುಲದ ಸೇವೆ'ಗೆ ಸಂಕಲ್ಪವಿಟ್ಟಂತೆ ದುಡಿಯುತ್ತಿರುವ ನವಕರ್ನಾಟಕ ಪಬ್ಲಿಕೇಷನ್ ಸಂಸ್ಥೆಯ `ತರಕಾರಿ ಸೇವೆ'ಗೆ ಮೂಲ ಪ್ರೇರಣೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಆರ್.ಎಸ್.ರಾಜಾರಾಂ. ಪರಿಸರ ಸಂರಕ್ಷಣೆ, ಪ್ರಕೃತಿ ಪೂರಕ ಕೃಷಿ ಪದ್ಧತಿಗಳನ್ನು ಅಕ್ಷರ ಲೋಕದ ಮೂಲಕ ಪ್ರೋತ್ಸಾಹಿಸುವ ರಾಜಾರಾಂ ಅವರು, ಸಂಸ್ಥೆಯ ಕೈತೋಟದಲ್ಲೇ ವಿಷರಹಿತ ತರಕಾರಿ ಬೆಳೆದು, ಹಂಚುವ ಮೂಲಕ ಕೃತಿಯಲ್ಲಿಯೂ `ಸಾವಯವ' ಪ್ರೀತಿಯನ್ನು ಮೂಡಿಸಿದ್ದಾರೆ.
ತೋಟ ಹೀಗಿದೆ ನೋಡಿ
ಬೆಂಗಳೂರಿನ ಪೀಣ್ಯಾದ ಕೈಗಾರಿಕಾ ಪ್ರದೇಶದಲ್ಲಿರುವ ಸಂಸ್ಥೆಯ ಮುದ್ರಣಾಲಯದ ಆವರಣದಲ್ಲಿ ಸುಮಾರು ಮುಕ್ಕಾಲು ಎಕರೆಯಷ್ಟು ಭೂಮಿಯಲ್ಲಿ ಈ ತರಕಾರಿ ತೋಟವಿದೆ.
ವಾಹನಗಳ ಪಾರ್ಕಿಂಗ್, ಕಟ್ಟಡಗಳ ಮುಂಭಾಗದ ಹುಲ್ಲು ಹಾಸು, ಒಂದು ಕಡೆ ಪುಟ್ಟ ಗುಲಾಬಿ ತೋಟ- ಹೀಗೆ ಖಾಲಿ ಸ್ಥಳವನ್ನು ಹಂಚಿಕೆ ಮಾಡಿ ಕೈತೋಟ ನಿರ್ಮಿಸಿದ್ದಾರೆ. ಕಾಂಪೌಂಡಿಗೆ ಹೊಂದಿಕೊಂಡಂತೆ ಸುತ್ತಲೂ ತೆಂಗಿನ ಸಸಿಗಳನ್ನು ನೆಟ್ಟಿದ್ದಾರೆ. ಮೂಲತಃ ದಕ್ಷಿಣ ಕರಾವಳಿಯವರಾದ ರಾಜಾರಾಂ ಅವರು, ಆ ಪ್ರದೇಶದ ಹಣ್ಣಿನ ಗಿಡಗಳನ್ನು ತಂದು ಬೆಂಗಳೂರಿನ ಹವಾಮಾನಕ್ಕೆ ಒಗ್ಗಿಸಿ ಬೆಳೆಸಿದ್ದಾರೆ.
ತೋಟದಲ್ಲಿ ವೈವಿಧ್ಯಮಯ ಗುಲಾಬಿ ಗಿಡಗಳಿವೆ. ಹೂವಿನ ಜೊತೆ ಹಣ್ಣಿನ ಗಿಡಗಳು ಸಂಗಾತಿ. ನೇರಳೆ, ಅಂಟುವಾಳದಂತಹ ಕಾಡುಮರಗಳೂ ಇವೆ. ಕರಾವಳಿಯ ದಿವಿ ಹಲಸು, ಬಿಂಬುಳಿ, ದಾರೆಹುಳಿ, ಬಯಲು ಸೀಮೆಯ ಮಾವು, ಹಲಸು, ಚಕ್ಕೋತ, ದಾಳಿಂಬೆ, ಸಪೋಟ, ಬೆಣ್ಣೆ ಹಣ್ಣು(ಅವಕಾಡೊ), ಪಪ್ಪಾಯಿ, ಅಂಜೂರ, ನೆಲ್ಲಿ, ಕಿರುನೆಲ್ಲಿ, ಜಲಸೇಬೆ, ನಿಂಬೆ, ಅಮಟೆ, ಸೀಬೆ, ಬಾಳೆ.. ಹೀಗೆ ಪರಿಚಯಿಸುತ್ತಾ ಹೊರಟರೆ, ಪುಟ್ಟದೊಂದು ಉದ್ಯಾನವನ್ನೇ ತೋರಿಸಿದಂತಾಗುತ್ತದೆ.
`ಕೈತೋಟದಲ್ಲಿ ವರ್ಷಪೂರ್ತಿ ಸೊಪ್ಪು, ಹುರುಳಿಕಾಯಿ, ಮೂಲಂಗಿ, ಕ್ಯಾರೆಟ್, ಪುದೀನ, ಬಸಳೆ ಲಭ್ಯ. ಬೇಸಿಗೆಯಲ್ಲಿ ಒಂದೆರಡು ತಿಂಗಳು ನೀರಿನ ಕೊರತೆಯಾದಾಗ ಮಾತ್ರ ತರಕಾರಿ ಪ್ರಮಾ
ಣ ತಗ್ಗುತ್ತದೆ. ಉಳಿದಂತೆ ಯಾವುದೇ ತೊಂದರೆಯಿಲ್ಲ' ಎನ್ನುತ್ತಾರೆ ಮುದ್ರಣಾಲಯದ ಉಸ್ತುವಾರಿ ವ್ಯವಸ್ಥಾಪಕ ಕುಮಾರ್.
ಕೈತೋಟ ನಿರ್ಮಾಣದ ಆರಂಭದಿಂದಲೂ ಇಲ್ಲೇ ಕೆಲಸ ಮಾಡುತ್ತಿರುವ ಸಿದ್ಧಣ್ಣ ದಂಪತಿ, ಗೊಬ್ಬರ ತಯಾರಿಕೆ, ತೋಟದ ನಿರ್ವಹಣೆಯ ಜವಾಬ್ದಾರಿ ಹೊತ್ತಿದ್ದಾರೆ. ಮುದ್ರಣಾಲಯದ ಆವರಣದಲ್ಲಿ ಐದು ವಸತಿ ಗೃಹಗಳಿವೆ. ಇಪ್ಪತ್ತು ಮಂದಿ ವಾಸವಿದ್ದಾರೆ. ಇಲ್ಲಿ ದೊರೆಯುವ ಅಡುಗೆ ತ್ಯಾಜ್ಯ, ಉದ್ಯಾನದಲ್ಲಿನ ಎಲೆಗಳು ಎಲ್ಲವನ್ನೂ ಒಟ್ಟು ಮಾಡಿ, ಗುಂಡಿಯಲ್ಲಿ ತುಂಬಿಸಿಟ್ಟು ಗೊಬ್ಬರ ಮಾಡಲಾಗುತ್ತದೆ. ಇದರ ಜೊತೆಗೆ ಕುರಿಗೊಬ್ಬರ, ಕುದರೆ ಗೊಬ್ಬರ, ಕತ್ತರಿಸಿದ ಹಸಿಸೊಪ್ಪನ್ನು ಗುಂಡಿಗಳಲ್ಲಿ ತುಂಬಿಸಿ ಗೊಬ್ಬರ ತಯಾರಿಸುತ್ತೇವೆ ಎನ್ನುತ್ತಾರೆ ಸಿದ್ಧಣ್ಣ. ಈ ಕೈತೋಟಕ್ಕೆ ರಸಗೊಬ್ಬರ ಮತ್ತು ಕೀಟನಾಶಕಗಳ ಬಳಕೆ ನಿಷಿದ್ಧ. ಬೇವಿನ ಸೊಪ್ಪನ್ನು ಬೇಯಿಸಿ ತಯಾರಿಸಿದ ದ್ರಾವಣವನ್ನು ಕ್ರಿಮಿನಾಶಕವಾಗಿ ಬಳಸಿದ ಉದಾಹರಣೆಗಳಿವೆ ಎಂದು ಅವರು ನೆನಪಿಸಿಕೊಳ್ಳುತ್ತಾರೆ.
ಮಳೆ ನೀರು ಸಂಗ್ರಹ ಆಧಾರ
ಕೆಲವು ವರ್ಷಗಳ ಹಿಂದೆ ಬೇಸಿಗೆಯಲ್ಲಿ ನೀರಿಗೆ ತೀವ್ರ ತೊಂದರೆಯಾಯಿತು. ತರಕಾರಿಗಳ ಪ್ರಮಾಣವೂ ತಗ್ಗಿತು. ಆ ಸಮಯದಲ್ಲಿ ಮಳೆ ಕೊಯ್ಲು ಅಳವಡಿಕೆ ಕುರಿತು ಸುದ್ದಿಗಳು ಬಿತ್ತರವಾಗುತ್ತಿದ್ದವು. ಇದನ್ನು ಮನಗಂಡ ರಾಜಾರಾಂ ಅವರು, ಚಿತ್ರದುರ್ಗದ ಮಳೆನೀರು ತಜ್ಞ ಎನ್.ಜೆ.ದೇವರಾಜರೆಡ್ಡಿಯವರ ನೆರವಿನಿಂದ ಮುದ್ರಣಾಲಯ ಕಟ್ಟಡಕ್ಕೆ ಮಳೆ ನೀರು ಸಂಗ್ರಹ ವಿಧಾನ ಅಳವಡಿಸಿದರು. ಕೊಳವೆಬಾವಿಗೆ ಜಲಮರುಪೂರಣ ಮಾಡಿಸಿದರು. ಅಷ್ಟೇ ಅಲ್ಲ, ಮಳೆ ನೀರು ಸಂಗ್ರಹದ ವಿಧಾನವನ್ನು ಕಿರು ಹೊತ್ತಿಗೆಯ ರೂಪದಲ್ಲಿ ಪ್ರಕಟಿಸಿದರು.
ಈಗ ಒಮ್ಮೆ ಮಳೆ ಸುರಿದರೆ ಲಕ್ಷ ಲೀಟರ್ ಸಂಪ್ ಟ್ಯಾಂಕ್‌ನಲ್ಲಿ ಸಂಗ್ರಹವಾಗುತ್ತದೆ. ಅಷ್ಟೇ ಪ್ರಮಾಣದ ನೀರು ಭೂಮಿಗೆ ಇಂಗುತ್ತದೆ. ಬೇಸಿಗೆಯಲ್ಲೂ ಕೊಳವೆ ಬಾವಿಯಲ್ಲಿ ನೀರಿನ ಮಟ್ಟ ಕಡಿಮೆಯಾಗಿಲ್ಲ. ಹಾಗಾಗಿ ವರ್ಷಪೂರ್ತಿ ಗಿಡಗಳು ಸೊಂಪಾಗಿ ನಳನಳಿಸುತ್ತವೆ' ಎನ್ನುತ್ತಾರೆ ಕುಮಾರ್.
ಮುದ್ರಣಾಲಯದಲ್ಲಿ ಕೇವಲ ಕೈತೋಟ ಬೆಳೆಸಿದರಷ್ಟೇ ಸಾಲದು, ಈ ಪ್ರಯೋಗ ಎಲ್ಲರಿಗೆ ತಲುಪಿಸಬೇಕೆಂಬ ಉದ್ದೇಶದೊಂದಿಗೆ, ತೋಟದಲ್ಲಿ ಬೆಳೆದು ಅರಳಿದ ಹೂವು, ಹಣ್ಣುಗಳು, ತರಕಾರಿಗಳ ಚಿತ್ರಗಳನ್ನು ಸಂಸ್ಥೆಯ ಪ್ರಕಟಣೆಗಳ ಮುಖಪುಟ, ಒಳಪುಟಗಳಲ್ಲಿ ಅಚ್ಚಾಗಿಸಿದ್ದಾರೆ ರಾಜಾರಾಂ.
ಪ್ರತಿ ತಿಂಗಳು ತೋಟದ ಉತ್ಪನ್ನಗಳನ್ನು ವಸತಿ ಗೃಹದ ಸಿಬ್ಬಂದಿ ಹಾಗೂ ಕಚೇರಿಯ ಸಿಬ್ಬಂದಿಗೆ ಹಂಚುತ್ತಾರೆ. `ಹಲಸು ಮತ್ತು ಮಾವಿನ ಹಣ್ಣಿನ ಕಾಲದಲ್ಲಿ ಕಚೇರಿಗೆ ಬರುವ ಅತಿಥಿಗಳಿಗೂ ಅವುಗಳ ರುಚಿ ನೋಡುವ ಭಾಗ್ಯ' ಎಂದು ನೆನಪಿಸಿಕೊಳ್ಳುತ್ತಾರೆ ಸಂಸ್ಥೆಯಲ್ಲಿ ಸಾಹಿತಿ ಕೆ.ಪಿ.ಸ್ವಾಮಿ.
ಪೀಣ್ಯಾ ಕೈಗಾರಿಕಾ ಪ್ರದೇಶದಂತಹ `ಇಂಗಾಲ' ಕಕ್ಕುವ ಕ್ಷೇತ್ರದಲ್ಲಿ, ನವಕರ್ನಾಟಕದ ಸಂಸ್ಥೆಯ ಈ ಕೈತೋಟ `ಇಂಗಾಲ ನುಂಗಿ, ಆಮ್ಲಜನಕ ಹೊರಸೂಸುವ' ಉದ್ಯಾನದಂತೆ ಕೆಲಸ ಮಾಡುತ್ತಿದೆ.
ವಿಶ್ವ ಕೈತೋಟ ದಿನಾಚರಣೆ
ಅಮೆರಿಕದ `ಕಿಚನ್ ಗಾರ್ಡನ್ ಇಂಟರ್ ನ್ಯಾಷನಲ್' (ಕೆಜಿಐ) ಎಂಬ ಸ್ವಯಂ ಸೇವಾ ಸಂಸ್ಥೆ ವಿಶ್ವ ಕೈತೋಟ ದಿನಾಚರಣೆಯನ್ನು ಆರಂಭಿಸಿತು. ವಿಷ ಮುಕ್ತ ಆಹಾರ ಕುರಿತು ಅರಿವು ಮೂಡಿಸಲು ಕನಿಷ್ಠ ಒಂದು ದಿನವನ್ನಾದರೂ ಮೀಸಲಿಡಲು ಈ ಸಂಸ್ಥೆ ನಿರ್ಧರಿಸಿತು. ಅದಕ್ಕಾಗಿ ಆಗಸ್ಟ್ ತಿಂಗಳ ಕೊನೆ ವಾರ ಆಯ್ಕೆ ಮಾಡಿತು. ಈ ಆಚರಣೆಯಲ್ಲಿ ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿರುವ ಕೈತೋಟ ಆಸಕ್ತರು ಒಂದೆಡೆ ಸೇರಿ, ತಮ್ಮ ಕೈತೋಟದಲ್ಲಿ  ಬೆಳೆದ ತರಕಾರಿಗಳನ್ನು ಒಂದೆಡೆ ಕಲೆ ಹಾಕಿ, ಹಬ್ಬದ ಅಡುಗೆ ಮಾಡಿ, ಸಹ ಭೋಜನ ಮಾಡುತ್ತಾರೆ. ಕೆಜಿಐಗೆ 45ಕ್ಕೂ ಹೆಚ್ಚು ದೇಶಗಳಲ್ಲಿ ಸದಸ್ಯರಿದ್ದಾರೆ. `ಮನೆ ಸನಿಹದಲ್ಲಿ ನಮ್ಮ ನಿಗಾದಲ್ಲಿ ಬೆಳೆದ ಆಹಾರಕ್ಕಿಂತ ಸುರಕ್ಷಿತವಾದದ್ದು ಯಾವುದೂ ಇಲ್ಲ. ನಮ್ಮ ಆರೋಗ್ಯದ ಗುಟ್ಟು ನಮ್ಮಲ್ಲೇ ಇದೆ' ಎಂಬುದನ್ನು ಜನರಲ್ಲಿ ಮನದಟ್ಟು ಮಾಡಿಸುವುದೇ ವಿಶ್ವ ಕೈತೋಟ ದಿನದ ಉದ್ದೇಶ' ಎನ್ನುತ್ತಾರೆ ಕೆಜಿಐ ಸ್ಥಾಪಕ ರೋಜರ್ ಡಾಯಿರಾನ್.
 http://www.prajavani.net/article/%E0%B2%B9%E0%B3%80%E0%B2%97%E0%B3%8A%E0%B2%82%E0%B2%A6%E0%B3%81-%E0%B2%A4%E0%B2%B0%E0%B2%95%E0%B2%BE%E0%B2%B0%E0%B2%BF-%E0%B2%B8%E0%B3%87%E0%B2%B5%E0%B3%86