Wednesday, September 27, 2017

"ಹಳಗನ್ನಡವನ್ನು ಓದಿ ತಿಳಿಯುವ ಬಗೆ ಹೇಗೆ?" ಕೃತಿಪರಿಚಯ


"ಹಳಗನ್ನಡವನ್ನು ಓದಿ ತಿಳಿಯುವ ಬಗೆ ಹೇಗೆ?"
ಲೇಖಕರು:ಟಿ ಎಸ್ ಗೋಪಾಲ್.
ಪ್ರಕಾಶಕರು:ನವಕರ್ನಾಟಕ ಪ್ರಕಾಶನ.
ಪುಟ:೬೪,ಬೆಲೆ :ರೂ.೪೫.


ನವಕರ್ನಾಟಕ ಕನ್ನಡ ಕಲಿಕೆ ಮಾಲಿಕೆಯಲ್ಲಿ ಪ್ರಕಟವಾಗಿರುವ ,ಟಿ.ಎಸ್ .ಗೋಪಾಲ್ ರವರು ಬರೆದಿರುವ, ಹಳಗನ್ನಡವನ್ನು ಓದಿ ತಿಳಿಯುವ ಸುಲಭೋಪಾಯಗಳನ್ನು ತಿಳಿಸುವ ಈ ಕೃತಿ ಕನ್ನಡ ಸಾಹಿತ್ಯಾಸಕ್ತರಿಗೆ ಹಳಗನ್ನಡ ಸಾಹಿತ್ಯದ ಮಹತ್ವವನ್ನೂ ಉಪಯುಕ್ತತೆಯನ್ನೂ ಅರ್ಥ ಮಾಡಿಸುವ ಸಾಧನವಾಗಿದೆ.
ಹಳಗನ್ನಡ ಕಾವ್ಯದ ಪ್ರಸ್ತುತತೆ,ವಿದ್ಯಾರ್ಥಿಗಳಿಗೆ,ಬೋಧಕರಿಗೆ,ಹಾಗೂ ಕಾವ್ಯಾಸ್ವಾದಕರಿಗೆ ಹೇಗೆ ಅಗತ್ಯ ಎಂಬುದರ ಪ್ರಸ್ತಾವನೆಗಳ ಮೂಲಕ ಕೃತಿ ಆರಂಭಗೊಂಡಿದೆ.ಹಳೆಗನ್ನಡದ ಪರಿಧಿಯಲ್ಲಿ ಪೂರ್ವದ ಹಳಗನ್ನಡ ,ಹಳಗನ್ನಡ ಹಾಗೂ ನಡುಗನ್ನಡ ಮುಂತಾದ ಕಾಲಘಟ್ಟಗಳನ್ನೂ ವ್ಯಾಪಕವಾಗಿ ಚರ್ಚಿಸಿ ನಿದರ್ಶನಗಳನ್ನು ನೀಡಿದ್ದಾರೆ ಲೇಖಕರು.
ಕನ್ನಡದ ಶಾಸನ ಪದ್ಯಗಳು,ಮೊದಲ ಗದ್ಯಕೃತಿ ವಡ್ಡಾರಾಧನೆ,ಕವಿರಾಜಮಾರ್ಗ,ಪಂಪಭಾರತ, ಗಧಾಯುದ್ಧ, ಕುಮಾರವ್ಯಾಸ ಭಾರತ,ಗಿರಿಜಾಕಲ್ಯಾಣ,ದುರ್ಗಸಿಂಹನ ಪಂಚತಂತ್ರ,ಜನ್ನನ ಅನಂತನಾಥ ಪುರಾಣ,ಮುಂತಾದ ಕೃತಿಗಳ ಪದ್ಯಗಳನ್ನು ವಿಭಕ್ತಿ ಪ್ರತ್ಯಯಗಳು,ಸರ್ವನಾಮಗಳು,ಕ್ರಿಯಾಪದಗಳು,ಭೂತ,ಭವಿಷ್ಯತ್ ವರ್ತಮಾನ ಕಾಲ,ಮುಂತಾದ ವ್ಯಾಕರಣ ಅಂಶಗಳ ವಿವರಣೆಗೆ ಸ್ವಾರಸ್ಯಕರವಾಗಿ ಬಳಸಿಕೊಳ್ಳಲಾಗಿದೆ.ಈ ಸಂಬಂಧ ನೀಡಿರುವ ಕೋಷ್ಟಕಗಳು ವಿಷಯದ ಸುಲಭಗ್ರಹಣಕ್ಕೆ ದಾರಿಮಾಡಿಕೊಟ್ಟಿವೆ.
ಹಳಗನ್ನಡ ಕಾವ್ಯ ಅರ್ಥ ಮಾಡಿಕೊಳ್ಳಲು ನಿಘಂಟು, ವ್ಯಾಕರಣ ಪುಸ್ತಕಗಳು ಸಹಾಯ ಮಾಡಿದರೂ ಸರಿಯಾಗಿ ಆಸ್ವಾದಿಸಲು ಸ್ವಂತ ಪರಿಶ್ರಮ ಬೇಕೆನ್ನುವುದು ಲೇಖಕರ ಅಭಿಮತ.
ಹಳೆಗನ್ನಡದ ಎಲ್ಲ ಮುಖ್ಯ ಕೃತಿಗಳನ್ನು ಪೂರ್ಣವಾಗಿ ಆಸ್ವಾದಿಸಲು ಸಾಧ್ಯವಾಗದಿದ್ದಲ್ಲಿ, ಕನಿಷ್ಠ ಮುಖ್ಯ ರಸಘಟ್ಟಗಳನ್ನಾದರೂ ಅರಿಯುವುದು ಅಗತ್ಯ ಎನ್ನುವ ಲೇಖಕರ ಕಳಕಳಿ ಖಂಡಿತ ಸ್ವೀಕಾರಾರ್ಹವಾದುದು.
ಮಕ್ಕಳನ್ನು ಗಮನದಲ್ಲಿರಿಸಿಕೊಂಡು ಬರೆಯಲಾದ ಈ ಕೃತಿ ಬೋಧಕರಿಗೂ ಕಾವ್ಯಾಸ್ವಾದಕರಿಗೂ ಅಷ್ಟೇ ಉಪಯುಕ್ತ ಎಂಬುದು ಸತ್ಯ.
ತಮ್ಮ ಉಪಾಧ್ಯಾಯ ವೃತ್ತಿಯ ಸಾರವನ್ನು ಧಾರೆ ಎರೆದು ಕೃತಿ ರಚಿಸಿರುವ ಲೇಖಕ ಗೋಪಾಲ್ ರವರಿಗೆ ಅಭಿನಂದನೆಗಳು.ಹಾಗೆಯೇ ನವಕರ್ನಾಟಕ ಪ್ರಕಾಶನಕ್ಕೂ.
"ಕಿರಿದರೊಳ್ ಪಿರಿದರ್ಥ" ನೀಡುವ ಈ ಕೃತಿಯನ್ನು ಪಡೆಯಿರಿ, ಓದಿರಿ ಹಾಗೂ ಆನಂದಿಸಿರಿ.
ಮಹಾಬಲ
http://www.navakarnatakaonline.com/bookslist?aid=92

No comments:

Post a Comment