Monday, January 21, 2013

Corruption - Book Release Function - News Clips 21 Jan 2013




ನ್ಯಾಯಾಂಗದಲ್ಲಿ ವ್ಯಾಪಕ ಭ್ರಷ್ಟಾಚಾರ: ವಿಷಾದ




ಬೆಂಗಳೂರು: `ನ್ಯಾಯಾಂಗದಲ್ಲಿ ಅತಿ ದೊಡ್ಡಮಟ್ಟದ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಇದನ್ನು ಪ್ರಶ್ನಿಸಿದವರ ವಿರುದ್ಧ ನ್ಯಾಯಾಂಗ ನಿಂದನೆ ಎಂಬ ಪ್ರಬಲ ಅಸ್ತ್ರವನ್ನು ಬಳಸಲಾಗುತ್ತಿದೆ' ಎಂದು ಹಿರಿಯ ವಕೀಲ ಪ್ರೊ. ರವಿಮರ್ಮ ಕುಮಾರ್ ವಿಷಾದಿಸಿದರು.
ಭಾರತೀಯ ವಕೀಲರ ಸಂಘ ಹಾಗೂ ನವಕರ್ನಾಟಕ ಪಬ್ಲಿಕೇಷನ್ ವತಿಯಿಂದ ನಗರದಲ್ಲಿ ಆಯೋಜಿಸಿದ್ದ `ಭ್ರಷ್ಟಾಚಾರದ ಸುಳಿಯಲ್ಲಿ ಭಾರತ', `ಕರಪ್ಷನ್ ದಿ ರಾಟ್ ವಿದಿನ್' ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
`ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದ್ದು, ಅದರ ಸುತ್ತ ನ್ಯಾಯಾಂಗ ನಿಂದನೆಯ ಕೋಟೆಯನ್ನು ನಿರ್ಮಿಸಲಾಗಿದೆ. ರಾಜಕೀಯ ಕ್ಷೇತ್ರದಲ್ಲಿ ಹೆಚ್ಚುತ್ತಿರುವ ಭ್ರಷ್ಟಾಚಾರವನ್ನು ಕಂಡುಹಿಡಿಯುವುದು ಸುಲಭ. ಆದರೆ, ನ್ಯಾಯಾಂಗ ಮತ್ತು ಕಾರ್ಯಾಂಗದಲ್ಲಿನ ಭ್ರಷ್ಟಾಚಾರವನ್ನು ಪತ್ತೆಹಚ್ಚುವುದು ಕಷ್ಟ' ಎಂದು ತಿಳಿಸಿದರು.
`ನ್ಯಾಯಾಂಗದಲ್ಲಿ ಭ್ರಷ್ಟಾಚಾರವೇನು ಹೊಸದಲ್ಲ ಆದರೆ, ಈ ಭ್ರಷ್ಟಾಚಾರ ಜಾತಿ ಮತ್ತು ಸ್ವಜನಪಕ್ಷಪಾತದಿಂದ ಕೂಡಿದೆ. ನ್ಯಾಯಾಂಗ ವ್ಯವಸ್ಥೆಯಲ್ಲಿನ ಜಾತಿ ತಾರತಮ್ಯದ ಆರೋಪವನ್ನು ಯಾರು ಅಲ್ಲಗೆಳೆಯುವುದಿಲ್ಲ. ನ್ಯಾಯಾಧೀಶರ ನೇಮಕಾತಿ ಪಾರದರ್ಶಕವಾಗಿಲ್ಲ. ಭ್ರಷ್ಟಾಚಾರ ತಡೆಯಲು ನ್ಯಾಯಾಂಗ ಬೇಲಿ. ಆದರೆ ಬೇಲಿಯೇ ಹೊಲ ಮೇಯುವ ಪರಿಸ್ಥಿತಿ ಬಂದಿದೆ' ಎಂದು ಆತಂಕ ವ್ಯಕ್ತಪಡಿಸಿದರು.  
`ದೇಶದಲ್ಲಿ ಸರ್ಕಾರಿ ನೌಕರರಿಗೆ ಸಂವಿಧಾನಬದ್ಧ ಉದ್ಯೋಗ ಭದ್ರತೆಯ ಹಕ್ಕನ್ನು ನೀಡಲಾಗಿದೆ. ಇದರಿಂದ ಆಡಳಿತ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಸರ್ಕಾರಿ ನೌಕರರಿಗೆ ಉದ್ಯೋಗ ಭದ್ರತೆ ನೀಡಿರುವ ಸಂವಿಧಾನದ 16 ಹಾಗೂ 311ಅನ್ನು ಪರಿಚ್ಛೇದಗಳನ್ನು ಪುನರ್ ವಿಮರ್ಶೆ ಮಾಡುವ ಅಗತ್ಯವಿದೆ' ಎಂದು ಹೇಳಿದರು.
ಸಮಾಜ ಪರಿವರ್ತನ ಸಮುದಾಯ ಹಿರಿಯ ಸಲಹೆಗಾರ ಎಸ್.ಆರ್. ಹಿರೇಮಠ, `ಆಸೆಬುರುಕ ಸಂಸ್ಕೃತಿಗೆ ಕಡಿವಾಣ ಹಾಕುವ ಮೂಲಕ ಭ್ರಷ್ಟಾಚಾರ ನಿಯಂತ್ರಣ ಮಾಡಲು ಸಾಧ್ಯವಿದೆ. ಸಾರ್ವಜನಿಕ ಸ್ವತ್ತುಗಳನ್ನು ಲೂಟಿ ಮಾಡುವವರ ವಿರುದ್ಧ ದತ್ತಿ ಎತ್ತುವ ಅಗತ್ಯವಿದೆ' ಎಂದು ತಿಳಿಸಿದರು.
ಕೇಂದ್ರ ವಿಚಕ್ಷಣ ಆಯುಕ್ತ ಆರ್. ಶ್ರೀಕುಮಾರ್, `ಚುನಾವಣಾ ಆಯೋಗ ಸಾಕಷ್ಟು ಸುಧಾರಿಸಿದೆ. ಆದರೆ ಉನ್ನತ ಅಧಿಕಾರಿಗಳಿಗೆ ಸಂಬಂಧಪಟ್ಟ ಭ್ರಷ್ಟಾಚಾರದ ಪ್ರಕರಣಗಳನ್ನು ಸೂಕ್ತವಾಗಿ ತನಿಖೆ ಮಾಡುವ ನಿಟ್ಟಿನಲ್ಲಿ ವಿಚಕ್ಷಣ ದಳ ಇನ್ನಷ್ಟು ಅಧಿಕಾರ ನೀಡಬೇಕು' ಎಂದು ಹೇಳಿದರು.
ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ, ಕೃತಿಕಾರ ವೈ.ಜಿ. ಮುರಳೀಧರನ್, ನವಕರ್ನಾಟಕ ಪ್ರಕಾಶನದ ವ್ಯವಸ್ಥಾಪಕ ನಿರ್ದೇಶಕ ಆರ್.ಎಸ್.ರಾಜಾರಾಂ ಇತರರು ಉಪಸ್ಥಿತರಿದ್ದರು.




No comments:

Post a Comment