http://issuu.com/navakarnataka/docs/kakkillaya_album_01
Monday, March 30, 2009
Desha Videshagala Parichaya - A Sample eBook from Navakarnataka Publications
http://issuu.com/navakarnataka/docs/desha_videshagala_parichaya_ebook_sample
Tuesday, March 24, 2009
Monday, March 23, 2009
Book Review - Mateyaru Manyaragiddaga of Debiprasad Chattopadhyaya - Published in Suddigiduga Daily - 23-03-2009
23-03-2009
ಬಂಗಾಳಿ ಲೇಖಕರು : ದೇವಿಪ್ರಸಾದ್ ಚಟ್ಟೋಪಾಧ್ಯಾಯ
ಕನ್ನಡ ಅನುವಾದ : ಜಿ. ಕುಮಾರಪ್ಪ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, ಬೆಂಗಳೂರು
ಪುಟಗಳು : 56 ಬೆಲೆ : ರೂ. 20-00
'ಮಾತೆಯರು ಅನ್ನಪೂರ್ಣೆಯರು' ಎಂದು ಬಾಯಿತುಂಬಾ ಹರಸಿದ್ದನ್ನು ಕೇಳಿದಾಗ 'ಬರೀ ಶಿಷ್ಟಾಚಾರದ ಮಾತು ಇದು' ಎಂದು ಉಪೇಕ್ಷೆ ಮಾಡುವವರೇ ಬಹಳ. ಮಾನವಶಾಸ್ತ್ರ ಮತ್ತು ಸಮಾಜಶಾಸ್ತ್ರದ ದೃಷ್ಟಿಯಿಂದ ಇತಿಹಾಸವನ್ನು ಕೆದಕಿದಾಗ ನಾಗರೀಕತೆಯ ಉಗಮಕ್ಕೂ ಮುಂಚಿನಿಂದಲೂ ಮಾತೆಯರೇ ಅನ್ನ ನೀಡುವ ಪವಿತ್ರ ಕಾರ್ಯ ಮಾಡುತ್ತಿದ್ದುದಷ್ಟೇ ಅಲ್ಲ ಧಾನ್ಯಗಳನ್ನು ಬೆಳೆಯುವ ಅದ್ಭುತವನ್ನು ಆವಿಷ್ಕರಿಸಿದ ಪರಿಸರ ವಿಜ್ಞಾನಿಗಳು ಎಂಬ ಅಂಶವೂ ಗಮನಕ್ಕೆ ಬರುತ್ತದೆ. ವಿಶ್ವ ಮಹಿಳಾ ದಿನ ಆಚರಿಸುವ ವೇದಿಕೆಗಳಲ್ಲಿ ಆದಿ ಮಾತೆಯರು ಜಗತ್ತಿಗೆ ನೀಡಿದ ಅಪರೂಪದ ಕೊಡುಗೆಗಳನ್ನು ನೆನಪಿಸಿಕೊಳ್ಳುವುದು ಉಚಿತ, ಅಲ್ಲವೇ?
'ಕೃಷಿ ಕಾರ್ಯ ಸ್ತ್ರೀಯರ ಆವಿಷ್ಕಾರ. ಇದರ ಆವಿಷ್ಕಾರದ ಆರಂಭದ ದಿನಗಳಲ್ಲಿ ವ್ಯವಸಾಯದ ಕೆಲಸ ಪೂರ್ತಿಯಾಗಿ ಸ್ತ್ರೀಯರದ್ದೇ ಆಗಿದ್ದಿತು. ಈ ವಿಚಾರದಲ್ಲಿ ಗಂಡಸರ ಸಹಾಯ, ಪ್ರಯತ್ನ ಎಳ್ಳಷ್ಟೂ ಇರಲಿಲ್ಲ. ಗಂಡಸರು ಬೇಟೆಯನ್ನು ಅರಸುತ್ತಾ ಕಾಡಿನಲ್ಲಿ ಅಲೆಯುತ್ತಿದ್ದರು. ಸ್ತ್ರೀಯರು ವಾಸಸ್ಥಳದ ಸುತ್ತಮುತ್ತ ನೆಲ ಅಗೆದು ಧಾನ್ಯ ಬೆಳೆಯುವ ಪ್ರಯತ್ನ ಮಾಡುತ್ತಿದ್ದರು....ಕೃಷಿ ಕೆಲಸ ಸ್ತ್ರೀಯರಿಂದ ಆವಿಷ್ಕರಿಸಲ್ಪಟ್ಟಿದ್ದರೂ, ಎತ್ತುಗಳನ್ನು ಹೂಡಿ ನೇಗಿಲಿನಿಂದ ಉಳುಮೆ ಮಾಡಿ ದೊಡ್ಡ ಜಮೀನುಗಳ ವ್ಯವಸಾಯ ಆರಂಭವಾದ ಮೇಲೆ, ಸ್ತ್ರೀಯರ ಕೈಯಿಂದ ಇದು ಪುರುಷರ ಕೈಗೆ ಬಂದಿತು....' ಎಂದು ಹಲವಾರು ದಂತೆಕಥೆಗಳು, ಪುರಾವೆಗಳು ಮತ್ತು ಕ್ಷೇತ್ರ ಅಧ್ಯಯನದ ಆಧಾರದ ಮೇಲೆ ನಿರೂಪಿತವಾಗಿರುವ ಸತ್ಯವನ್ನು'ಮಾತೆಯರು ಮಾನ್ಯರಾಗಿದ್ದಾಗ' ಕೃತಿಯಲ್ಲಿ ಹಿಡಿದಿಟ್ಟಿದ್ದಾರೆ ದೇವಿಪ್ರಸಾದ್ ಚಟ್ಟೋಪಾಧ್ಯಾಯ ಅವರು. ಜಿ. ಕುಮಾರಪ್ಪ ಅವರು ಬೆಂಗಾಲಿಯಿಂದ ಕನ್ನಡಕ್ಕೆ ಅಷ್ಟೇ ಸಮರ್ಥವಾಗಿ ಅನುವಾದಿಸಿದ್ದಾರೆ.
'ಅಮೆರಿಕಾದಲ್ಲಿನ ಒಂದು ಆದಿವಾಸಿ ಗುಂಪಿನ ಹೆಸರು ಚೆರೋಕಿ. ಅವರ ಒಂದು ದಂತಕಥೆಯ ಪ್ರಕಾರ ಒಬ್ಬ ಸ್ತ್ರೀ ಅರಣ್ಯದಲ್ಲಿ ಮೊದಲು ಸಸ್ಯವನ್ನು ಹುಡುಕಿದಳು. ಸಾಯುವಾಗ ಆ ಸ್ತ್ರೀ ತಾನು ಸತ್ತಮೇಲೆ ತನ್ನ ದೇಹವನ್ನು ನೆಲದ ಮೇಲಿಂದ ಎಳೆದುಕೊಂಡು ಹೋಗಬೇಕೆಂದು ಹೇಳಿದ್ದಳು. ಅವಳ ದೇಹ ಎಲ್ಲೆಲ್ಲಿ ನೆಲವನ್ನು ಸ್ಪಶರ್ಿಸಿದ್ದಿತೋ ಅಲ್ಲೆಲ್ಲಾ ಬೆಳೆ ಸಮೃದ್ಧಿಯಾಗಿ ಬೆಳದಿದ್ದಿತು.' ಈ ಬಗೆಯ ದಂತಕಥೆಗಳು ಜಗತ್ತಿನ ಬೇರೆ ಬೇರೆ ಕಡೆಗಳಲ್ಲಿ ಪ್ರಚಲಿತವಾಗಿರುವುದನ್ನು ಸಂಗ್ರಹಿಸಿ ದಂತೆಕಥೆಗಳ ಕೋಶವನ್ನೇ ರಚಿಸಿರುವ ಸಂಶೋಧಕ ರಾಬಟರ್್ ಬ್ರಿಫಾಲ್ಟ್ ಅವರ ಕ್ಷೇತ್ರಕಾರ್ಯದ ಅನುಭವಗಳನ್ನು ಉಲ್ಲೇಖಿಸುತ್ತಾ ವಿಶ್ವದ ಎಲ್ಲೆಡೆಯೂ ಸ್ತ್ರೀಯರಿಂದ ಆಗಿರುವ ಹಲವು ಆವಿಷ್ಕಾರಗಳ ಸುದೀರ್ಘ ಪಟ್ಟಿಯನ್ನೇ ನೀಡುತ್ತಾರೆ ದೇಬಿಪ್ರಸಾದ್ ಚಟ್ಟೋಪಾಧ್ಯಾಯ. ಮಾತೃ ಪ್ರಧಾನ ನಾಗರಿಕ ಸಮುದಾಯದ ಉಗಮ ಮತ್ತು ಅದರ ಪರಿಣಾಮಗಳ ಬಗ್ಗೆ ಸಚಿತ್ರ ವಿವರಗಳ ಜೊತೆ ಕ್ರಮೇಣ ಪಿತೃಪ್ರಧಾನ ವ್ಯವಸ್ಥೆಯತ್ತ ನಡೆದ ಕಥೆಯನ್ನು ಕಟ್ಟಿಕೊಡುತ್ತದೆ ಈ ಕೃತಿ.
ಭಾರತದ ಈಶಾನ್ಯ ರಾಜ್ಯಗಳಲ್ಲಿ, ಅದರಲ್ಲೂ ಕಾಮರೂಪದ ಕಾಮಾಕ್ಷ ಪ್ರದೇಶದ ಮತ್ತು ಖಾಸಿ ಜನಾಂಗದಲ್ಲಿ ಇರುವ ಮಾತೃಪ್ರಧಾನ ವ್ಯವಸ್ಥೆಯ ನಿರೂಪಣೆ ಸಮಾಜಶಾಸ್ತ್ರ ಮತ್ತು ಮಾನವಶಾಸ್ತ್ರದ ಅಭ್ಯಾಸಿಗಳಿಗೆ ಅತ್ಯುಪಯುಕ್ತವಾಗಿದೆ. ಕೇರಳದ ಕೆಲವು ಜನಾಂಗಳಲ್ಲಿ, ಈಜಿಪ್ಟ್, ಸಿಂಧೂ ಬಯಲು, ರೋಮ್, ಅಮೆರಿಕದ ಕೆಲವು ಬುಡಕಟ್ಟುಗಳಲ್ಲಿ ಇರುವ ಮಾತೃಪ್ರಧಾನ ವ್ಯವಸ್ಥೆಯನ್ನು ಇಲ್ಲಿ ಪರಿಚಯಿಸಿದ್ದಾರೆ. 'ಭಾರತೀಯ ನಾಗರೀಕತೆಯ ಮೂಲದಲ್ಲಿ ಮಾತೃಪ್ರಧಾನ ಸಮಾಜದ ಇತಿಹಾಸವಿರುವ ಕಾರಣವು ಅಸ್ಪಷ್ಟವೇನೂ ಅಲ್ಲ. ಏಕೆಂದರೆ, ಸಾಧಾರಣವಾಗಿ ಈ ದೇಶದ ಜನರು ಪಶುಪಾಲನೆಯ ಮೇಲೆ ಅವಲಂಬಿತರಾಗಿಲ್ಲ; ಬದಲಾಗಿ, ವ್ಯವಸಾಯದ ಮೇಲೆ ಅವಲಂಬಿತರಾಗಿದ್ದಾರೆ. ಈ ಕೃಷಿ ಕಾರ್ಯ ಸ್ತ್ರೀಯರ ಆವಿಷ್ಕಾರ. ಕೃಷಿಕೆಲಸವನ್ನು ಅವಲಂಬಿಸಿ ಬೆಳೆದ ಸಮಾಜದಲ್ಲಿ ಸ್ತ್ರೀಯರೇ ಮುಖ್ಯರು, ತಾಯಂದಿರೇ ಮಾನ್ಯರು..........ಒಟ್ಟಂದದಲ್ಲಿ ಭಾರತೀಯ ನಾಗರಿಕತೆ ಎಂದು ಹೇಳುವಲ್ಲಿ ಅರ್ಥವಾಗುವ ಸಂಸ್ಕೃತಿಗಳು ಮಾತೃಪ್ರಧಾನ ಸಮಾಜದ ಗುರುತುಗಳಿಂದ ತುಂಬಿವೆ...........ಭಾರತೀಯ ನಾಗರಿಕತೆಯ ಇತಿಹಾಸವೆಂದು ಬರೆಯಲಾಗಿರುವ ಎಷ್ಟೋ ಇತಿಹಾಸ ಗ್ರಂಥಗಳಲ್ಲಿ ಈ ಮಾತೃಪ್ರಧಾನ ಸಮಾಜದ ಲಕ್ಷಣಗಳ ಬಗ್ಗೆ ಹೆಚ್ಚಿನ ಆಲೋಚನೆ ನಡೆದಿಲ್ಲ....' ಎಂದು ಭಾರತೀಯ ನಾಗರಿಕತೆಯ ಇತಿಹಾಸವನ್ನು ಹೊಸ ದೃಷ್ಟಿಕೋನದಿಂದ ನೋಡಲು, ಹೊಸ ಇತಿಹಾಸ ನಡೆಸಲು ಕರೆಕೊಡುವುದರೊಂದಿಗೆ ಈ ಕೃತಿ ಮುಕ್ತಾಯವಾಗುತ್ತದೆ. ಬಹುಶಃ ಜನ್ಮದಾತೆ, ಅನ್ನದಾತೆ, ಪ್ರಾಣದಾತೆ, ಜಗನ್ಮಾತೆ ಎಲ್ಲವೂ ಆಗಿರುವ ಸ್ತ್ರೀಯರು ಈಗ ಸಮಾನತೆಗಾಗಿ, ಸ್ವಾತಂತ್ರ್ಯಕ್ಕಾಗಿ, ಮೀಸಲಾತಿಗಾಗಿ, ತುತ್ತು ಅನ್ನಕ್ಕಾಗಿ ಬೊಗಸೆಯೊಡ್ಡುತ್ತಿರುವುದು ನವ ನಾಗರಿಕತೆಯ ಅವನತಿಗೆ ಸಾಕ್ಷಿಯಾಗುತ್ತಿದೆಯೇ?
Friday, March 20, 2009
Thursday, March 19, 2009
Tuesday, March 17, 2009
FELICITATION VOLUME : NIRANTARA - Review by Pustakapreethi
ನಮ್ಮ ನಾಡಿನ ಹಿರಿಯ ಮುತ್ಸದ್ದಿ ಸಂಗಾತಿ ಬೇವಿಂಜೆ ವಿಷ್ಣು ಕಕ್ಕಿಲ್ಲಾಯ (ಬಿವಿಕೆ) ಅವರಿಗೆ ಈಗ 90 ವರ್ಷ. ಭಾರತ ಕಮ್ಯೂನಿಸ್ಟ್ ಪಕ್ಷದ ನಾಯಕರಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ, ಕರ್ನಾಟಕ ಏಕೀಕರಣ ಚಳುವಳಿಕಾರರಾಗಿ, ರಾಜ್ಯಸಭೆ ಮತ್ತು ಕರ್ನಾಟಕದ ಶಾಸನ ಸಭೆಗಳ ಸದಸ್ಯರಾಗಿ, ರೈತ ಕಾರ್ಮಿಕ ನಾಯಕರಾಗಿ ಇವರು ಸಲ್ಲಿಸಿರುವ ಸೇವೆ ಇತಿಹಾಸದ ಪುಟಗಳಲ್ಲಿ ಸೇರಿಹೋಗಿದೆ. ಬಿವಿಕೆ ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಿಸಿರುವ ವೈಚಾರಿಕ ಸಾಹಿತ್ಯ ಸಂಪದ ಹಲವು ಬಾರಿ ಕನ್ನಡ ಸಾಹಿತ್ಯ ಅಕಾಡಮಿಯ ಗೌರವಕ್ಕೆ, ಓದುಗರ ಆದರಕ್ಕೆ ಪಾತ್ರವಾಗಿದ್ದು, ಅವುಗಳು ಬರುವ ದಿನಗಳಲ್ಲೂ ಪರಿಗಣನೆಗೆ ಬರುವಂಥವು. ನೊಂದವರಿಗೆ ದನಿ ನೀಡಿದ ಈ ಅಜ್ಜನಿಗೆ ನಮ್ಮ ಅಭಿಮಾನಿ ವಿದ್ವಜ್ಜನ ಅರ್ಪಿಸುತ್ತಿರುವ ಮೆಚ್ಚಿಗೆಯ ಕಾಣಿಕೆ ಈ `ನಿರಂತನ‘
ಬಿವಿಕೆಯವರು ತಮ್ಮ ಬಾಳಿನಲ್ಲಿ ಹಚ್ಚಿಕೊಂಡು, ಕಟಿಬದ್ಧ ಕಲಕಳಿಯಿಂದ ಹೋರಾಡಿದ, ಇಂದಿಗೂ ಪ್ರಸ್ತುತವಾದ ಹಲವು ಜ್ವಲಂತ ಸಮಸ್ಯೆಗಳನ್ನು ಕುರಿತು ನಾಡಿನ ಪ್ರಗತಿಶೀಲ ವಿದ್ವಾಂಸರು ಈ ಗ್ರಂಥಕ್ಕಾಗಿ ಮೌಲಿಕ ಲೇಖನಗಳನ್ನು ನೀಡಿ ನುಡಿ ನಮಾನವನ್ನು ಸಲ್ಲಿಸಿದ್ದಾರೆ. ಬಂಡವಾಳ ವ್ಯವಸ್ಥೆಯ ನಿರಂತರ ಶೋಷಣೆಯ ಬೆಳವಣಿಗೆ, ರಾಷ್ಟ್ರ, ರಾಜ್ಯ ಪರಿಕಲ್ಪನೆಗಳ ಸಂಘರ್ಷ, ಆಧುನಿಕ ಕನ್ನಡ ಸಾಹಿತ್ಯದಲ್ಲಿ ಮೂಡಿಬರುವ ಪ್ರತಿರೋಧದ ನೆಲೆಗಳು, ಮಾರ್ಕ್ಸ್ ಮತ್ತು ವಿಜ್ಞಾನ, ಮಹಿಳಾ ಅಭಿವೃದ್ಧಿ ಅಧ್ಯಯನ, ಹಾಲಿ ತಪ್ಪುತ್ತಿರುವ ವಿದೇಶಾಂಗ ನೀತಿ, ಸ್ವಾತಂತ್ರ್ಯ ಸಂಗ್ರಾಮದ ಆಶಯಗಳು. ಮೌಲ್ಯಗಳು ಮತ್ತು ವಾಸ್ತವ, ರೈತ ಕಾರ್ಮಿಕ ಚಳುವಳಿಗಳು, ಕೋಮುವಾದಕ್ಕೆ ತುತ್ತಾದ ಸಮಾಜದಲ್ಲಿ ಧರ್ಮನಿರಪೇಕ್ಷತೆಗೆ ಕುಗ್ಗುತ್ತಿರುವ ಅವಕಾಶಗಳು ಹೀಗೆಲ್ಲ `ನಿರಂತರ‘ ದ ತುಂಬಾ ಗಂಭೀರವಾದ ಬರಹಗಳು ತುಂಬಿದೆ. `ನಿರಂತರ‘ ನಮ್ಮ ನಾಡಿನ ಹೆಸರಾಂತ ವಿದ್ವಜ್ಜನರು ನೀಡಿರುವ ಮಹತ್ವದ, ಮೌಲಿಕ ಲೇಖನಗಳನ್ನೇ ಅಲ್ಲದೇ, ಕಕ್ಕಿಲ್ಲಯರ ಅಭಿಮಾನಿಗಳು ಬರೆದ ಅಭಿನಂದನಾ ಬರಹಗಳನ್ನೂ ಒಳಗೊಂಡಿದೆ. ಒಟ್ಟಾರೆ ಸಂಗ್ರಹಯೋಗ್ಯವಾದ ವೈಚಾರಿಕತೆಯ ಖನಿಯಾಗಿ ರೂಪುಗೊಂಡಿದೆ ಈ `ನಿರಂತರ‘
- ಪುಸ್ತಕದ ಬೆನ್ನುಡಿಯಿಂದ
ಪುಸ್ತಕದ ಆರಂಭದಲ್ಲಿ ಬಿವಿಕೆಯವರ ಕೈಬರಹದಲ್ಲಿ ಇರುವ `ಸಂಗಾತಿಗಳಿಗೆ ಒಂದು ಮನವಿ’ಇಂದಾಗಿ ಈ ಪುಸ್ತಕ ಇನ್ನಷ್ಟು ಆತ್ಮೀಯವಾಗುತ್ತದೆ. ಇದು `ಆ ದಿಶೆಯಲ್ಲಿ ಯೋಚಿಸಿ, ಯೋಜನೆ ರೂಪಿಸಿ, ಕಾರ್ಯಕ್ಕೆ ಇಳಿಯಿರಿ’ ಎಂದು ಕಿರಿಯ ಸಂಗಾತಿಗಳಿಗೆ ಮನವಿ ಮಾಡುತ್ತದೆ.- ವಿಶಾಲಮತಿ
ಶೀರ್ಷಿಕೆ: ನಿರಂತರ ಸಂಪಾದಕರು: ಕೆ.ಎಸ್.ಪಾರ್ಥಸಾರಥಿ ಪ್ರಕಾಶನ:ಎಮ್.ಎಸ್. ಕೃಷ್ಣನ್ ಸ್ಮರಣ ಸಂಸ್ಥೆ ಪುಟಗಳು:532 ಬೆಲೆ:ರೂ.300/-
Filed under: ಅಭಿನಂದನ ಗ್ರಂಥ Tagged: ಎಮ್.ಎಸ್. ಕೃಷ್ಣನ್ ಸ್ಮರಣ ಸಂಸ್ಥೆ, ಕೆ.ಎಸ್.ಪಾರ್ಥಸಾರಥಿ, ನಿರಂತರ, ಬೇವಿಂಜೆ ವಿಷ್ಣು ಕಕ್ಕಿಲ್ಲಾಯ (ಬಿವಿಕೆ)
Monday, February 16, 2009
Thursday, February 12, 2009
Book Review of Matheyaru Manyaragiddaga - by Dr. Deviprasad Chattopadhyaya

ಕೃಷಿ ಕಾರ್ಯ ಮೂಲತಃ ಸ್ತ್ರೀಯರ ಆವಿಷ್ಕಾರ
`ಮಾತೆಯರು ಮಾನ್ಯರಾಗಿದ್ದಾಗ‘ ಡಾ. ದೇವಿಪ್ರಸಾದ್ ಚಟ್ಟೋಪಧ್ಯಾಯರ ಪುಟ್ಟ ಅಂತೆಯೇ ವಿಚಾರ ಪ್ರಚೋದಕ ಪುಸ್ತಕ.
ಕೃಷಿಕಾರ್ಯದ ತಿಳುವಳಿಕೆಯಿಂದಲೇ ಎಲ್ಲ ನಾಗರೀಕತೆಗಳು ಉಗಮಗೊಂಡವು. ಈಜಿಪ್ಟ್, ಮೆಸಪಟೋಮಿಯ ಮತ್ತು ಮೊಹೆಂಜೋದಾರೋ - ಈ ಅಪರೂಪದ ಹಾಗೂ ವಿಸ್ಮಯಕರ ನಾಗರೀಕತೆಗಳೆಲ್ಲಾ ನದಿ ದಂಡೆಗಳ ಮೇಲೆಯೇ ಬೆಳೆದವಲ್ಲವೇ? ಕೃಷಿಕಾರ್ಯದ ತಿಳುವಳಿಕೆ ಖಗೋಳ ವಿಜ್ಞಾನದ, ತರುವಾಯ ಇತರ ವಿಜ್ಞಾನಗಳ ಆವಿಷ್ಕಾರಕ್ಕೆ ಕಾರಣವಾಯಿತು.
ಕೃಷಿ ಕೆಲಸದ ಆವಿಷ್ಕಾರವೇ ನಾಗರೀಕತೆಗಳ ಬುನಾದಿ ಎಂಬುದು ಸರಿಯಷ್ಟೆ. ಆದರೆ ಈ ಆವಿಷ್ಕಾರದ ಮೂಲ ಕಾರಣಕರ್ತರು ಯಾರು? ಪುರುಷರೋ? ಸ್ತ್ರೀಯರೋ? ಉತ್ತರ ಕೇಳಿದರೆ ಈಗಿನವರಾದ ನಮಗೆ ಆಶ್ಚರ್ಯವಾಗಬಹುದು. ಏಕೆಂದರೆ ಕೃಷಿ ಕಾರ್ಯ ಮೂಲತಃ ಪುರುಷ ಆವಿಷ್ಕಾರವೇನೂ ಆಗಿರಲಿಲ್ಲ. ಅದು ಸ್ತ್ರೀಯರ ಆವಿಷ್ಕಾರ!
ಇಂಥ ಹಲವು ವಿಷಯಗಳನ್ನು ತಿಳಿಸಿಕೊಡುವ ಈ ಪುಸ್ತಕವನ್ನು ಕಲ್ಕತ್ತೆಯ ನ್ಯಾಷನಲ್ ಲೈಬ್ರರಿಯ ಶ್ರೀ ಜಿ.ಕುಮಾರಪ್ಪ ಅವರು ಬಂಗಾಳಿ ಭಾಷೆಯಿಂದ ಅನುವಾದಿಸಿದ್ದಾರೆ.
`ನಾವೀಗ ಮಾತೃಪ್ರಧಾನ ಸಮಾಜವನ್ನು ಮನಸ್ಸಿನಲ್ಲಿರಿಸಿಕೊಂಡು ಭಾರತೀಯ ಸಂಸ್ಕೃತಿಯನ್ನು ತಿಳಿಯುವ ಪ್ರಯತ್ನವನ್ನು ಮಾಡೋಣ
ವೈದಿಕ ಕಾಲದ ಜನರ ವಿಚಾರವನ್ನು ಮೊದಲು ಆಲೋಚಿಸೋಣ. ಯಾವುದು ಅವರ ಜೀವನಾಧಾರದ ಮೂಲ ಉದ್ದೇಶವಾಗಿದ್ದಿತು? ಪಶುಪಾಲನೆ. ಅವರು ಕೃಷಿ ಕಾರ್ಯ ತಿಳಿದಿದ್ದರೇ? ತಿಳಿದಿದ್ದರೆ, ಎಷ್ಟರ ಮಟ್ಟಿಗೆ? ಇದರ ಬಗ್ಗೆ ವಿಭಿನ್ನವಾದ ಚಚರ್ೆಗಳಿವೆ. ಆದರೆ ಅವರ ಜೀವನೋಪಾಯಕ್ಕೆ ಆದಿ ಕಾಲದಲ್ಲಿ ವ್ಯವಸಾಯವು ಮೂಲ ಉದ್ಯೋಗವಾಗಿರಲಿಲ್ಲ. ಬದಲಾಗಿ ಪಶುಪಾಲನೆ ಎನ್ನುವ ವಿಚಾರದಲ್ಲಿ ಯಾವುದೇ ಸಂದೇಹಗಳಿಲ್ಲ.
ಇದು ಸರಿ ಇದ್ದಲ್ಲಿ, ಅವರ ಸಮಾಜದ ಲಕ್ಷಣಗಳು ಹೇಗಿದ್ದವು? ಆ ಸಮಾಜ ಪಿತೃ ಪ್ರಧಾನ ಸಮಾಜವಾಗಿದ್ದಿತು. ಆ ಸಮಾಜದ ಮನುಷ್ಯನು ಕಲ್ಪಿಸಿದ ದೇವಾನುದೇವತೆಗಳಲ್ಲಿ ದೇವನು ದೊಡ್ಡವನೋ? ಅಥವಾ ದೇವಿಯೋ? ನಿಶ್ಚಯವಾಗಿಯೂ ಪುರುಷ ದೇವತೆಗಳು ಅಗ್ರಸ್ಥಾನದಲ್ಲಿದ್ದಾರೆ. …. …. ….
ಆದರೆ ಭಾರತೀಯ ಸಂಸ್ಕೃತಿ ಎಂದು ಹೇಳುವಲ್ಲಿ ವಾಸ್ತವವಾಗಿ ವೈದಿಕ ಕಾಲದ ಕಾಣಿಕೆ ಎಷ್ಟು? ಬಹಳ ಕಡಿಮೆ. ನಮ್ಮ ಬಂಗಾಳದ ಅಥವಾ ಯಾವುದೇ ಬೇರೆ ಭಾಗದ ವಿಚಾರವನ್ನೇ ನೋಡುವಾ. ದುರ್ಗಾ, ಕಾಳಿ, ಜಗದ್ಧಾತ್ರಿ, ಅನ್ನಪೂರ್ಣಾ, ಲಕ್ಷ್ಮಿ - ಇನ್ನಷ್ಟು. ಇವರೆಲ್ಲಾ ದೇವಿಯರು, ದೇವರುಗಳಲ್ಲ. ಅಲ್ಲದೆ, ವೇದಕಾಲದ ದೇವಗಣದೊಂದಿಗೆ ಇವರ ಸಂಪರ್ಕ ಹೆಚ್ಚೇನೂ ಇಲ್ಲ. ವಾಸ್ತವವಾಗಿ, ವೇದಕಾಲದ ಈ ಪುರುಷ ದೇವತೆಗಳು ದೇಶದ ಜನರ ಮನಸ್ಸಿನಲ್ಲಿ ಸ್ಥಾನವನ್ನೇನೂ ಗಳಿಸಿಕೊಂಡಿಲ್ಲ. ಇಂದ್ರ, ಮಿತ್ರ, ವರುಣ, ಪೂಷನ್, ಮಾತರಿಶ್ವನ್, ಅಗ್ನಿ ಮುಂತಾದವರೆಲ್ಲರನ್ನೂ ಕುರಿತು ತಲೆ ಕೆಡಿಸಿಕೊಳ್ಳುತ್ತಿರುವವರು ಕೇವಲ ಪಂಡಿತರು ಮಾತ್ರ.
ಖಾಸಿಯರನ್ನು ಕುರಿತು ಆಲೋಚಿಸುವಾಗ ನಾವು ಒಂದು ವಿಚಾರವನ್ನು ಕಂಡುಕೊಂಡಿದ್ದೇವೆ: ದೇವ-ದೇವತೆಗಳ ವಿಚಾರ ಎಷ್ಟು ಮುಖ್ಯ ಎನ್ನುವುದೇ ಆ ವಿಚಾರ. ಆ ದೇವರುಗಳಲ್ಲಿ ಪುರುಷ ದೇವತೆಗಳ ಮಹಾತ್ಮೆಯನ್ನು ಸ್ತ್ರೀ ದೇವತೆಗಳ ಮಹಾತ್ಮೆ ಮುಚ್ಚಿ ಹಾಕಿದ್ದಲ್ಲಿ, ಮಾತೃಪ್ರಧಾನ ಸಮಾಜದ ಸ್ಮೃತಿ ಇದರ ಹಿನ್ನೆಲೆಯಲ್ಲಿ ಅಡಗಿದೆ, ಎಂದು ನಾವು ಸಂದೇಹ ಪಡಬೇಕಾಗಿದೆ.
… … ….
ಭಾರತೀಯ ನಾಗರೀಕತೆಯ ಮೂಲದಲ್ಲಿ ಮಾತೃ ಪ್ರಧಾನ ಸಮಾಜದ ಇತಿಹಾಸವಿರುವ ಕಾರಣವು ಅಸ್ಪಷ್ಟವೇನೂ ಅಲ್ಲ. …‘
ಹೀಗೆ ಕಾರಣ ಸಹಿತವಾಗಿ ಮಾನವ ನಾಗರೀಕತೆಗೆ ಮಹಿಳೆಯ ಪಾತ್ರ ಬಹು ದೊಡ್ಡದು ಎಂದು ಈ ಪುಸ್ತಕದಲ್ಲಿ ಪ್ರತಿಪಾದಿತವಾಗಿದೆ. ಅಲ್ಲದೆ ಸ್ತ್ರೀ ಪ್ರಧಾನ ಸಮಾಜ ಹೇಗೆ ಪುರುಷ ಪ್ರಧಾನವಾಗಿ ಮಾರ್ಪಡುತ್ತದೆ ಹಾಗೇ ಪುರುಷ ಪ್ರಧಾನವಾಗಿದ್ದ ಸಮಾಜ ಹೇಗೆ ಸ್ತ್ರೀ ಪ್ರಧಾನವಾಗಿ ಮಾರ್ಪಡುತ್ತದೆ ಎನ್ನುವುದು ಈ ಪುಸ್ತಕದಿಂದ ನಾವು ತಿಳಿಯಬಹದುದು. ಆ ತಿಳುವಳಿಕೆಯ ಆಧಾರದಲ್ಲಿ ಪುರುಷ ಪ್ರಧಾನ ಅಥವಾ ಸ್ತ್ರೀ ಪ್ರಧಾನ ಸಂಸ್ಕೃತಿಯನ್ನು ಹಿಂದೆ ಬಿಟ್ಟು ಲಿಂಗ ಭೇದವಿಲ್ಲದ ಸಮಾಜ ನಿರ್ಮಾಣ ಮಾಡಬೇಕಾಗಿದೆ ಎಂದು ಈ ಪುಸ್ತಕ ಓದಿದಾಗ ನನಗೆ ಅನಿಸಿದ ಭಾವನೆ.
- ವಿಶಾಲಮತಿ
ಶೀರ್ಷಿಕೆ: ಮಾತೆಯರು ಮಾನ್ಯರಾಗಿದ್ದಾಗ ಲೇಖಕರು: ಡಾ.ದೇವಿಪ್ರಸಾದ್ ಚಟ್ಟೋಪಧ್ಯಾಯ ಪ್ರಕಾಶಕರು: ನವಕರ್ನಾಟಕ ಪ್ರಕಾಶನ ಪುಟಗಳು:55 ಬೆಲೆ:ರೂ.20/
http://pusthakapreethi.wordpress.com/
ಕೃಷಿ ಕಾರ್ಯ ಮೂಲತಃ ಸ್ತ್ರೀಯರ ಆವಿಷ್ಕಾರ
Saturday, January 17, 2009
Saturday, January 3, 2009
Friday, January 2, 2009
Book Review of Manassu Illada Maarga of Dr. Meenagundi Subrahmanyam in Pustaka Preethi
http://pusthakapreethi.wordpress.com/2009/01/01Book Review of Manassu Illada Maarga of Dr. Meenagundi Subrahmanyam
ನನಗೆ ಗೀತೆ, ಕುರಾನ್, ಬೈಬಲ್ ಸರ್ವವೂ ಆಗಿರುವ ಒಂದು ಪುಸ್ತಕ
ಪುಸ್ತಕ ಪ್ರೀತಿ ಬ್ಲಾಗ್ ಓದುಗರಿಗೆ ಹೊಸ ವರ್ಷದ ಶುಭಾಶಯಗಳು.
ಹೊಸ ವರ್ಷದ ಮೊದಲ ದಿನ ನನಗೆ ಗೀತೆ, ಕುರಾನ್, ಬೈಬಲ್ ಸರ್ವವೂ ಆಗಿರುವ ಒಂದು ಪುಸ್ತಕದ ಬಗ್ಗೆ ಬರೆಯಲು ಇಚ್ಛಿಸುತ್ತೇನೆ. ಈ ಪುಸ್ತಕ ಮನಶ್ಶಾಸ್ತ್ರಕ್ಕೆ ಸಂಬಂದಿಸಿದ್ದು. ಇದೇನು ಮೊದಲ ವರ್ಷದ ಮೊದಲ ದಿನ ಇಂತಹ ಪುಸ್ತಕವನ್ನು ಪರಿಚಯಿಸಲು ಹೊರಟಿದ್ದು ಎಂದು ಬೇಸರಿಸಬೇಡಿ. ಇದು ಅಂತಿಂಥ ಪುಸ್ತಕವಲ್ಲ! ನನ್ನಲ್ಲಿ ನನಗೆ ನಂಬಿಕೆ ಹುಟ್ಟಿಸಿದ ಪುಸ್ತಕ ಇದು. ನನ್ನ ಎಲ್ಲಾ ನಕಾರಾತ್ಮಕ ಅನುಭವಗಳನ್ನು ನಿವಾರಿಸಿಕೊಳ್ಳಲು ಸಹಾಯ ಮಾಡಿದ ಪುಸ್ತಕ ಇದು. ಹಾಗೇ ನನ್ನ ಬಾಳಿನ ಹಾದಿಯಲ್ಲಿ ಯಾವುದೇ ನಕಾರಾತ್ಮಕ ಅನುಭವಗಳು ಆದೊಡನೆ ಈ ನಕಾರಾತ್ಮಕ ಅನುಭವಕ್ಕೆ ನಾನು ಎಷ್ಟರ ಮಟ್ಟಿಗೆ ಕಾರಣ ಅದನ್ನು ಇನ್ನು ಮುಂದೆ ನನ್ನ ಬಾಳಿನಲ್ಲಿ ಬರದಂತೆ ಮಾಡುವಲ್ಲಿ ನನ್ನ ಮಾರ್ಗದ ರ್ಶಿಯಾದದ್ದು ಈ ಪುಸ್ತಕ.
`ತಲೆ ಸರಿ ಇಲ್ಲದವರಿಗೆ ಮಾತ್ರ ಸೈಕಾಲಜಿ‘ ಎಂಬ ಸಾರ್ವತ್ರಿಕ ಕಲ್ಪನೆ ಪ್ರಬಲವಾಗಿ ಚಲಾವಣೆಯಲ್ಲಿದೆ. ಆದರೆ `ತಲೆ ಸರಿ ಇರುವವರು‘ ಕೂಡ ಸೈಕಾಲಜಿ ತಿಳಿದು ತಮ್ಮ `ಸರಿಯಾದ‘ ಜೀವನ ಶೈಲಿಯನ್ನು ಇನ್ನಷ್ಟು ಸರಿಮಾಡಿಕೊಳ್ಳಬಹುದು ಎಂಬುದು ವಾಸ್ತವ. ಸೈಕೋಥೆರಪಿ ಎಂದರೆ ಯಾರು ಅಥವಾ ಯಾವುದು ಸರಿ ಅಥವಾ ತಪ್ಪು ಎಂದು ನ್ಯಾಯ-ನಿರ್ಣಯ ಮಾಡಿ ಬುದ್ಧಿಮಾತು ತಿಳಿಹೇಳುವುದಲ್ಲ; ಈಗ ಇರುವ ಸಮಸ್ಯೆ ಪರಿಹಾರ ಆಗುವಂತೆ ಮನುಷ್ಯ ತನ್ನನ್ನು ಮತ್ತು ತನ್ನ ಪರಿಸರವನ್ನು ನೋಡುತ್ತಿರುವ ರೀತಿಯನ್ನು ಬದಲಾಯಿಸಿಕೊಳ್ಳುವಂತೆ ಮಾಡುವುದು. ಈ ನಿಟ್ಟಿನಲ್ಲಿ ನಮಗೆ ಸಹಾಯ ಮಾಡುವ ಪುಸ್ತಕ `ಮನಸ್ಸು ಇಲ್ಲದ ಮಾರ್ಗ’.
ಮನುಷ್ಯನ ಮಿದುಳು ಒಂದು ವಿಶೇಷ ರೀತಿಯ `ಕ್ಯಾಸೆಟ್ ರೆಕಾರ್ಡರ್ ಪ್ಲೇಯರ್‘ ನಂತೆ ಕೆಲಸ ಮಾಡುತ್ತದೆ. ಮಿದುಳಿನಲ್ಲಿ ಒಮ್ಮೆ ಮುದ್ರಿತವಾದ ವಿವರಗಳನ್ನು ಅಳಿಸಿಹಾಕಲು ಸಾಧ್ಯವಿಲ್ಲ. ಹುಟ್ಟಿದಂದಿನಿಂದ ಈ ಕ್ಷಣದವರೆಗೆ ಒಬ್ಬ ಮನುಷ್ಯನ ಜೀವನದ ಪ್ರತಿಯೊಂದು ಘಟನೆಯ ಸ್ಪರ್ಶ, ರಸ, ಗಂಧ, ದೃಶ್ಯ ಮತ್ತು ಶ್ರಾವ್ಯ ವಿವರಗಳನ್ನು ಅವನ ಮಿದುಳು ಶಾಶ್ವತ ರೂಪದಲ್ಲಿ ದಾಖಲಿಸಿಕೊಳ್ಳುತ್ತದೆ. ಜನಸಾಮಾನ್ಯರ ಕಲ್ಪನೆಯಲ್ಲಿರುವಂತೆ `ಮನಸ್ಸು‘ ಕೆಲಸ ಮಾಡುವ ಅವಯವ ಅಲ್ಲ. ಮಿದುಳು ಎಂಬ ಅವಯವದ ಎಲ್ಲ ಕ್ರಿಯೆಗಳನ್ನು ಮನಸ್ಸು ಎಂಬ ಒಂದೇ ಶಬ್ದದಡಿಯಲ್ಲಿ ವಿಜ್ಞಾನಿಗಳು ಕರೆಯುತ್ತಾರೆ (ಫಂಕ್ಶನಲ್ ಆಸ್ಪೆಕ್ಟ್ ಆಫ್ ಬ್ರೈನ್ ಈಸ್ ಮೈಂಡ್).
ಅಸಂಗತ ಮತ್ತು ಅನಾವಶ್ಯಕ ಭಯ, ದುಃಖ, ಕೋಪಗಳನ್ನು ಅನುಭವಿಸುತ್ತಾ ತಮ್ಮ ಜನ್ಮಸಿದ್ಧ ಹಕ್ಕು ಆದ ಆತ್ಮೀಯತೆ ಮತ್ತು ಸಂತೋಷದ ಅನುಭವದಿಂದ ಸ್ವಯಂ ವಂಚಿತರಾಗಿದ್ದ (ಮಾನಸಿಕ ಸಮಸ್ಯೆಯ) ವ್ಯಕ್ತಿಗಳು ಸೈಕಾಲಾಜಿಸ್ಟ್ `ಏನೋ‘ ಮಾಡಿ ತಮ್ಮ `ಮನಸ್ಸನ್ನು‘ ಸರಿ ಮಾಡುತ್ತಾನೆ, ಬದಲಾಯಿಸುತ್ತಾನೆ. ಇದರಿಂದಾಗಿ ತಮ್ಮ `ಮನಸ್ಸಿನಲ್ಲಿ‘ ಮತ್ತು ದೇಹದಲ್ಲಿ ಆಗುತ್ತಿರುವ ನಕಾರಾತ್ಮಕ ಅನುಭವಗಳು ನಿಲ್ಲುತ್ತವೆ ಎಂಬ ನಿರೀಕ್ಷೆ ಇಟ್ಟುಕೊಂಡು ನನ್ನ ಸಹಾಯ ಬಯಸಿ ಬಂದಿದ್ದರು. ಆದರೆ ಇವರೆಲ್ಲರಿಗೆ ನಾನು ತೋರಿಸಿದ್ದು `ಮನಸ್ಸು‘ ಇಲ್ಲದ ಮಾರ್ಗವನ್ನು, ಥೆರಪಿಯ ನವ್ಯ ಮಾರ್ಗವನ್ನು ಎನ್ನುತ್ತಾರೆ ಸ್ವತಃ ಥೆರಪಿಸ್ಟ್ ಆಗಿರುವ ಲೇಖಕರು. ಅಂದರೆ ಮನೋರೋಗದ ಸೃಷ್ಟಿ ಮತ್ತು ನಿವಾರಣೆ ಈ ಎರಡಕ್ಕೂ ಆಧಾರ ಒಂದೇ - ಮನುಷ್ಯನ ನೆನಪಿಸಿಕೊಳ್ಳುವ ಕ್ರಿಯೆ. ಈ ಕ್ರಿಯೆಯನ್ನು `ನಾನು ಮಾಡುತ್ತಿದ್ದೇನೆ‘ ಎನ್ನುವವನು ಬದುಕಿನಲ್ಲಿ ಗೆಲ್ಲುತ್ತಾನೆ; `ನಾನಲ್ಲ, ನನ್ನ `ಮನಸ್ಸು‘ ಮಾಡುತ್ತಿದೆ ಎನ್ನುವವನು ಅನುಕಂಪ ಪಡೆಯುವುದರಲ್ಲಿ ಕೆಲವೊಮ್ಮೆ ಗೆಲ್ಲಬಹುದು.
ಸಾಂಪ್ರದಾಯಿಕ ಥೆರಪಿಗೆ ಪರ್ಯಾಯವಾಗಿ ಹುಟ್ಟಿದ ಎಲ್ಲ ನವ್ಯ ಥೆರಪಿಗಳ ಸಾಮಾನ್ಯ ಅಂಶ - ಮನುಷ್ಯ ಮತ್ತು ಮನಸ್ಸು ಈ ಎರಡನ್ನೂ ಒಂದಾಗಿ ಪರಿಗಣಿಸಿ ಮನುಷ್ಯನನ್ನೇ ವಾಸಿ ಮಾಡಬೇಕು ಎಂಬ `ಸಮಗ್ರ ಮನುಷ್ಯ‘ ಸಿದ್ಧಾಂತ (ಹೊಲಿಸ್ಟಿಕ್ ಫಿಲಾಸಫಿ). ನವ್ಯ ಥೆರಪಿಗಳಲ್ಲಿ ತೀರ ಇತ್ತೀಚಿನದು ಟ್ರ್ಯಾನ್ಸ್ಯಾಕ್ಶನಲ್ ಅನಾಲಿಸಿಸ್-ಟಿಎ. ಪರ್ಸನಾಲಿಟಿ, ಕಮ್ಯೂನಿಕೇಶನ್ ಮತ್ತು ಮೋಟಿವೇಶನ್ ಎಂದರೆ ವ್ಯಕ್ತಿತ್ವ, ಸಂಪರ್ಕ ಮತ್ತು ಪ್ರವರ್ತಕ ಉದ್ದೇಶ ಈ ಮೂರನ್ನೂ ಒಳಗೊಂಡ ಸಮಗ್ರ ಸಿದ್ಧಾಂತ ಈ ಟಿಎ.
1970 ರಿಂದ 1982. ವೃತ್ತಿ ಜೀವನದಲ್ಲಿ ಯಶಸ್ವಿ ವೈದ್ಯ, ಆದ್ದರಿಂದ ಗೌರವಾನ್ವಿತ ವ್ಯಕ್ತಿಯಾಗಿಯೇ ಸಮಾಜದಿಂದ ಪರಿಗಣಿಸಲ್ಪಟ್ಟಿದ್ದೆ. ಆದರೆ ನನ್ನ ಬಗ್ಗೆ ನಾನು ಅತೃಪ್ತನಾಗಿದ್ದೆ. ಶೀಘ್ರಕೋಪ, ತಪ್ಪಿದರೆ ಖಿನ್ನತೆ. ಈ ಎರಡರಿಂದಾಗಿ ಜೀವನ ಪ್ರೀತಿ ಇಲ್ಲವಾಗಿತ್ತು. ಕೋಪ, ಖಿನ್ನತೆ ಕಳೆದುಕೊಳ್ಳಲು ಸೈಕ್ರಿಯಾಟ್ರಿಸ್ಟ್, ಸೈಕಾಲಾಜಿಸ್ಟರ ಬೇಟಿ. ಪರಿಣಾಮ - ಸಮಸ್ಯೆಗಳು ಹೆಚ್ಚಾಗಲಿಲ್ಲ ಎಂಬುದೊಂದೇ ಸಮಾಧಾನ. ಆದರೆ ತೊಲಗಲಿಲ್ಲ. ಸಮಸ್ಯೆಗಳನ್ನು ತೊಲಗಿಸಿಕೊಳ್ಳಲು ಮಾರ್ಗಗಳ ಹುಡುಕಾಟ ಮುಂದುವರಿಸಿಯೇ ಇದ್ದೆ. ಕೊನೆಗೊಮ್ಮೆ ಟಿಎ ಸೈಕಾಲಾಜಿಯ ನೆರವಿನಿಂದ, 1983ರಲ್ಲಿ, ನನ್ನ ಸಮಸ್ಯೆಗಳನ್ನು ನೀಗಿಕೊಳ್ಳುವಲ್ಲಿ ಯಶ ಸಾಧಿಸಿದೆ! ತರಬೇತಿಯ ಕೊನೆಯ ದಿನಗಳಲ್ಲಿ, ನಿಷ್ಕ್ರಿಯ ಮಾರ್ಗಗಳಲ್ಲಿ (ಪ್ಯಾಸಿವ್ ಅಪ್ರೋಚ್) ವ್ಯರ್ಥ ಹೋರಾಟ ಮಾಡುತ್ತಲಿರುವ ಓದು ಬಲ್ಲ ಕನ್ನಡ ಬಂಧುಗಳಿಗೆ ಟಿಎಯನ್ನು ತಲುಪಿಸಬೇಕು ಎಂಬ ಆಲೋಚನೆ ಮೂಡಿತು. ಟಿಎಯ ವೈಶಿಷ್ಟ್ಯ ಇರುವುದೇ ಇಲ್ಲಿ-ಇದನ್ನು ಅನುಭವಿಸಿದವರಲ್ಲಿ (ಓದುವುದಲ್ಲ, ತರಬೇತಿ ಶಿಬಿರದಲ್ಲಿ ಭಾಗವಹಿಸಿ ಅನುಭವಿಸಿರಬೇಕು) ಟಿಎ ಒಂದು ಸಾಮಾಜಿಕ ಹೊಣೆಯನ್ನು ಬಡಿದೆಬ್ಬಿಸುತ್ತದೆ. ಕಾಲ ಕಳೆದಂತೆ ಯೋಚನೆ ಗಟ್ಟಿ ನಿರ್ಧಾರವಾಯಿತು. ನಿರ್ಧಾರ ಕಾರ್ಯಗತವೂ ಆಯಿತು. ನನ್ನ ಮನೆಯಲ್ಲಿ ನಡೆಯುವ ಥೆರಪಿ ಗ್ರೂಪ್ ಗೆ ಸೀಮಿತವಾಗಿದ್ದ ಟಿಎ `ಮನಸ್ಸು ಇಲ್ಲದ ಮಾರ್ಗ‘ ದಿಂದಾಗಿ ನಾಡಿನ ಇತರ ಭಾಗಗಳಿಗೂ ತಲುಪಿತು ಎನ್ನುತ್ತಾರೆ ಮೀನಗುಂಡಿ ಸುಬ್ರಹ್ಮಣ್ಯಂ, `ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿ‘ ಪುರಸ್ಕೃತ ಈ ಪುಸ್ತಕವನ್ನು ಬರೆಯುವ ತಮ್ಮ ತುಡಿತದ ಬಗ್ಗೆ ಹೇಳುತ್ತಾ.
ಮಾನಸಿಕ ಸಮಸ್ಯೆಗಳನ್ನು ಪರಿಹರಿಸಲು ಹಲವಾರು ವೈಜ್ಞಾನಿಕ ಪಂಥಗಳು ಇವೆ. ಇವುಗಳಲ್ಲಿ, ಪಾಶ್ಚಾತ್ಯ ದೇಶಗಳಲ್ಲಿ ಹೆಚ್ಚು ಜನಪ್ರಿಯವಾಗುತ್ತ ಮತ್ತು 1970 ರಿಂದೀಚೆಗೆ ಭಾರತವೂ ಸೇರಿದಂತೆ ವಿಶ್ವಾದ್ಯಂತ ಪ್ರಬಲವಾಗಿ ಬೆಳೆಯುತ್ತಿರುವ ಎರಡು ಪಂಥಗಳು ಗೆಸ್ಟಾಲ್ ಥೆರಪಿ ಮತ್ತು ಟ್ರ್ಯಾನ್ಸ್ಯಾಕ್ಶನಲ್ ಅನಾಲಿಸಿಸ್. ಈ ಎರಡು ಪಂಥಗಳನ್ನು ಆಧರಿಸಿ ಮಾನಸಿಕ ಸಮಸ್ಯೆಗಳನ್ನು ಹೇಗೆ ವಾಸಿ ಮಾಡಲಾಗುತ್ತದೆ ಎಂಬುದನ್ನು ತಿಳಿಸಲು, ಲೇಖಕರ ಉಪವೃತ್ತಿಯ, ಕೆಲವು ಚಿಕತ್ಸಾ ವರದಿಗಳನ್ನು ಇಲ್ಲಿ ನಾವು ಓದಬಹುದು. ತಮ್ಮ ಯೋಚನೆ, ಮಾತು, ಕೃತಿಗಳ ಅರ್ಥ (ಇನ್ ಸೈಟ್) ತಿಳಿದಾಗ ಮಾನಸಿಕ ಸಮಸ್ಯೆ ಇರುವ ವ್ಯಕ್ತಿಗಳು ತಮ್ಮ ನಿಲುವನ್ನು ಹೇಗೆ ಬದಲಾಯಿಸಿಕೊಳ್ಳುತ್ತಾರೆ ಎಂಬುದನ್ನು ತಿಳಿಸಲು ಚಿಕಿತ್ಸೆಯ ಸಂವಾದಗಳನ್ನು, ಅವು ನಡೆದಂತೆಯೇ ಬರೆಯಲಾಗಿದೆ. (ಗೋಪ್ಯ ಕಾಪಾಡಲು ಹೆಸರು ಬದಲಾಯಿಸಲಾಗಿದೆ.)
ಮನೋರೋಗ ಚಿಕಿತ್ಸೆಯ ಬಗ್ಗೆ ನಮ್ಮ ಪ್ರಶ್ನೆಗಳಿಗೆ ಸಂಶಯಗಳಿಗೆ ಉತ್ತರ ನಿವಾರಣೆ ಈ ಪುಸ್ತಕದಲ್ಲಿದೆ.
ಪುಸ್ತಕದ ಆರಂಭದಲ್ಲಿಯೇ `ಶಾಪ‘ಗಳಿಂದ ಬಿಡುಗಡೆ ಮಾಡಿದ `ರೆವರೆಂಡ್ ಫಾದರ್ ಜಾರ್ಜ್ ಕಂಡತ್ತಿಲ್ಲ ಎಸ್.ಜೆ. ಮತ್ತು ಸಿಸ್ಟರ್ ಅನ್ನಿ ಮಾರಿಯ ಸಿ.ಎಂ. ಅವರಿಗೆ ಸಪ್ರೇಮ ಅರ್ಪಣೆ ಎಂದಿದ್ದಾರೆ ಲೇಖಕರು. ಅರೆ! ಪುರಾಣ ಕತೆಗಳಲ್ಲಿ ಬರುವ `ಶಾಪ‘ ಎನ್ನುವ ಶಬ್ದ ಈ ಪುಸ್ತಕದಲ್ಲಿ ಹೇಗೆ? ಆಶ್ಚರ್ಯವಾಗಿರಬೇಕಲ್ಲ. ಇದಕ್ಕಿಂತ ಆಶ್ಚರ್ಯ ಈ `ಶಾಪ‘ ಗಳ ವಿವರಣೆಯನ್ನು ಓದಿದಾಗ ಆಗುತ್ತದೆ :
ಮಗು ತನ್ನ ಮಿದುಳಿನಲ್ಲಿ ದಾಖಲಿಸಿದ ತಂದೆ ತಾಯಿ ಮತ್ತಿತರ ಪೋಷಕರ ಮಗುವಿನ ಭವಿಷ್ಯದ ಬಗೆಗಿನ ಮಾತುಗಳನ್ನು `ಸಂದೇಶ‘ (ಮೆಸೇಜ್) ಎಂತಲೂ, ಈ ಸಂದೇಶವನ್ನು ಯಾವ ರೀತಿ ಅಥವಾ ಯಾರ ಹಾಗೆ ಸಾಧಿಸಬಹುದು ಎನ್ನುವ ಮಾಹಿತಿಗಳನ್ನು `ಮಾದರಿ‘ (ಮಾಡೆಲ್) ಎಂತಲೂ, ಅಸಹಾಯಕ ಕೋಪ, ದುಃಖದಿಂದ ಅಥವಾ ತಮಾಷೆಗೆ ಎಂದು ಮಗುವಿಗೆ ಹೇಳುವ ನಕಾರಾತ್ಮಕ ಮಾತುಗಳನ್ನು `ಶಾಪ‘ (ಇಂಜಕ್ಷನ್ ಅಥವಾ ಕರ್ಸ್ಸ್) ಎಂದೂ ಕರೆಯಲಾಗುತ್ತದೆ.
ಸಂದೇಶ, ಮಾದರಿ, ಶಾಪಗಳ ರೀತಿ ಮತ್ತು ಶಾಪಗಳ ನಕಾರಾತ್ಮಕತೆಯ ಪ್ರಮಾಣದಲ್ಲಿ ಹೆಚ್ಚು ಕಡಿಮೆ ಇರಬಹುದು ವಿನಾ ಇವನ್ನು ಕೊಡದ ತಂದೆ ತಾಯಿಯರೂ ಇಲ್ಲ, ಇವನ್ನು ಪಡೆಯದ ಮಗುವೂ ಇಲ್ಲ.
`ಪ್ರೀತಿಯಿಂದ, ಅವನು/ಳು ಕೇಳಿದ್ದೆಲ್ಲ ಕೊಟ್ಟು, ಚೆನ್ನಾಗಿಯೇ ಬೆಳೆಸಿದ್ದೇವೆ,’ ಎನ್ನುವ ತಂದೆತಾಯಂದಿರು ತಮಾಷೆಗೆ ಎಂದು ಮತ್ತು ಶಿಸ್ತು, ಸಂಯಮ, ಬುದ್ದಿ ಕಲಿಸುವ ಹೆಸರಿನಲ್ಲಿ `ಅವನ/ಳ ಒಳ್ಳೆಯದಕ್ಕೇ‘ ಮಾಡುವ ಹೆಚ್ಚಿನ ಕೆಲಸಗಳೆಲ್ಲ `ಶಾಪ‘ವೇ ಆಗುವುದು ಮನುಷ್ಯ ಜೀವನದ ದುರಂತ!
ಹೀಗೆ ನಮ್ಮ ದೈನಂದಿನ ಬದುಕಿನಲ್ಲಿ ನಾವು ಎದುರಿಸುವ ಹಿಂಜರಿತ, ನೋವು, ಸುಖ, ದುಃಖ ಮುಂತಾದವುಗಳಿಗೆ ಯಾವುದೇ ಗ್ರಹಚಾರ, ದೇವರು, ದೆವ್ವ ಕಾರಣವಲ್ಲ ನಾವೇ ಅದಕ್ಕೆಲ್ಲಾ ಜವಾಬ್ದಾರರು. ನಮ್ಮ ಸುಖ/ದುಃಖ ಗಳನ್ನು ಹೇಗೆ ನಾವೇ ಅನುಭವಿಸುತ್ತೇವೋ ಅದಕ್ಕೆ ಕಾರಣರೂ ನಾವೇ. ನಮ್ಮಿಂದ ಹೊರಗೆ ಇರುವ ಬೇರೆ ವಸ್ತು ಕಾರಣವಲ್ಲ ಎಂಬ ನಿತ್ಯ ಸತ್ಯವನ್ನು ಮನಗಾಣಿಸಿ ಕೊಡುವ, ನಾವೇ ಸೃಷ್ಟಿಸುವ ನಕಾರಾತ್ಮಕ ಭಾವನೆಗಳ ಅನುಭವ ನಮಗೆ ಬೇಡವಾದಲ್ಲಿ ಅದನ್ನು ತ್ಯಜಿಸುವ ಸ್ವಾತಂತ್ರ್ಯ ನಮ್ಮದಿದೆ ಅನ್ನುವ ಸತ್ಯವನ್ನು ತಿಳಿಸುವ ಈ ಪುಸ್ತಕ ಅದ್ಭುತ.
ಪುಸ್ತಕದ ಆರಂಭದಲ್ಲೇ ಲೇಖಕರು `ಎಲ್ಲಿಂದಾದರೂ ಓದಲು ಪ್ರಾರಂಭಿಸಿದರೆ ಸರಿಯಾದ ಅರ್ಥ ಆಗುವುದಕ್ಕಿಂತ ಹೆಚ್ಚಾಗಿ ಅಪಾರ್ಥ ಅನರ್ಥಗಳೇ ಆಗುವ ಸಂಭವವಿರುವುದರಿಂದ, ದಯಮಾಡಿ, ಈ ಪುಸ್ತಕವನ್ನು ಮೊದಲ ಪುಟದಿಂದ ಅನುಕ್ರಮವಾಗಿ ಓದಿ.‘ ಎಂದಿದ್ದಾರೆ. ಆದರೆ ಈ ಪುಸ್ತಕದ ವಿಶಾಲ ಹರಹನ್ನು ಹೇಳುವ ಉತ್ಸಾಹದಲ್ಲಿ ಅಲ್ಲೊಂದು ಇಲ್ಲೊಂದು ಮಾತುಗಳನ್ನು ಉದ್ಧರಿಸಿ ಇಲ್ಲಿ ಕೊಟ್ಟಿದ್ದೇನೆ. ಇದು ಈ ಪುಸ್ತಕದ ಲಾಭವನ್ನು ಎಲ್ಲರೂ ಪಡೆದುಕೊಳ್ಳಲಿ ಎನ್ನುವ ಸದಾಶಯದಿಂದ ಮಾಡಿದ ತಪ್ಪು. ಅದಕ್ಕಾಗಿ ಲೇಖಕರ ಕ್ಷಮೆಯನ್ನು ಇಲ್ಲಿ ಕೋರುತ್ತೇನೆ.
ಮತ್ತೊಮ್ಮೆ ಹೊಸ ವರ್ಷದಲ್ಲಿ ನೀವೆಲ್ಲ ಹೊಸ ಸಕಾರಾತ್ಮಕ ಅನುಭವ (ಸುಖ, ಸಂತೋಷ, ಉಲ್ಲಾಸ, ಸಮಾಧಾನ) ಗಳನ್ನು ಹೊಂದುವಲ್ಲಿ ಯಶಸ್ವಿಯಾಗಿರೆಂದು ಹಾರೈಸುವ
-ವಿಶಾಲಮತಿ
ಶೀರ್ಷಿಕೆ: ಮಾನಸಿಕ ಸಮಸ್ಯೆಗಳಿಗೆ `ಮನಸ್ಸು‘ ಇಲ್ಲದ ಮಾರ್ಗ ಲೇಖಕರು: ಡಾ.ಮೀನಗುಂಡಿ ಸುಬ್ರಹ್ಮಣ್ಯಂ ಪ್ರಕಾಶಕರು:ನವಕರ್ನಾಟಕ ಪ್ರಕಾಶನ ಪುಟಗಳು:312 ಬೆಲೆ:ರೂ.95/-
Filed under: ವೈದ್ಯಕೀಯ-ಮನಶ್ಯಾಸ್ತ್ Tagged: ಆತ್ಮ ಶಕ್ತಿ ವಿದ್ಯಾಲಯ, ಡಾ.ಮೀನಗುಂಡಿ ಸುಬ್ರಹ್ಮಣ್ಯಂ, ನವಕರ್ನಾಟಕ ಪ್ರಕಾಶನ, ಮಾನಸಿಕ ಸಮಸ್ಯೆಗಳಿಗೆ `ಮನಸ್ಸು' ಇಲ್ಲದ ಮಾರ್ಗ


























